ಪಾಟ್ನಾ(ಬಿಹಾರ) : ಕರ್ನಾಟಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಬೆಳಕಿಗೆ ಬಂದಿದೆ. ಅಕ್ರಮವೆಸಗಿ ನೇಮಕಾತಿ ಪಟ್ಟಿಯಲ್ಲಿ ವ್ಯಕ್ತಿಯೋರ್ವ ಸ್ಥಾನ ಗಳಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಇದೆಲ್ಲಾ ಒಂದೆಡೆಯಾದರೆ ಮತ್ತೊಂದೆಡೆ ಸರ್ಕಾರದ ನೇಮಕಾತಿ ಸಂಸ್ಥೆಗಳ ಅಕ್ರಮಗಳಿಗೆ ಅದಷ್ಟೋ ಮಂದಿ ನೊಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ವರ್ಷಗಟ್ಟಲೇ ಕಷ್ಟಪಟ್ಟು ಓದಿದ ಬಡ ಪ್ರತಿಭಾವಂತರು ಕಂಗಾಲಾಗಿದ್ದಾರೆ. ಅವರ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ನೇಮಕಾತಿ ಸಂಸ್ಥೆಗಳಲ್ಲಿದ್ದು, ಭ್ರಷ್ಟಾಚಾರ ಎಸಗುವವರಿಗೆ ವರ್ಷಗಟ್ಟಲೇ ಕಷ್ಟಪಟ್ಟು ಓದಿ, ಪರೀಕ್ಷೆಗೆ ಸಿದ್ಧವಾಗುವವರ ಪರಿಶ್ರಮ ಅರ್ಥವಾಗಬೇಕಾದರೆ ಅವರನ್ನೇ ಕೇಳಬೇಕಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಕೆಲವು ಫೋಟೋಗಳು ವೈರಲ್ ಆಗುತ್ತಿವೆ. ನದಿಯೊಂದರ ದಡದಲ್ಲಿರುವ ಮೆಟ್ಟಿಲುಗಳ ಮೇಲೆ ನೂರಾರು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಸತತ ಅಭ್ಯಾಸ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದರೆ ಖಂಡಿತಾ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಪರಿಶ್ರಮ ಅರ್ಥವಾಗುತ್ತದೆ. ಉದ್ಯಮಿ ಹರ್ಷ ಗೋಯೆಂಕಾ ಎಂಬುವವರು ಫೋಟೋವೊಂದನ್ನು ಹಂಚಿಕೊಂಡಿದ್ದು, ಬಿಹಾರದ ಪಾಟ್ನಾದ ಗಂಗಾ ನದಿಯ ದಡದಲ್ಲಿ ನೂರಾರು ಸ್ಪರ್ಧಾರ್ಥಿಗಳು ಪರೀಕ್ಷಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರ ಭರವಸೆಯನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.
ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರಿ ನೇಮಕಾತಿ ಸಂಸ್ಥೆಗಳಾದ ಎಸ್ಎಸ್ಸಿ, ಯುಪಿಎಸ್ಸಿ, ರಾಜ್ಯ ನೇಮಕಾತಿ ಸಂಸ್ಥೆಗಳು ನಡೆಸುವ ಪರೀಕ್ಷೆಗಳು ಹಾಗೂ ಇತರೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ. ಪ್ರತಿ ವಾರಾಂತ್ಯದಲ್ಲಿ ನದಿಯ ದಡದಲ್ಲಿ ಒಟ್ಟಿಗೆ ಕುಳಿತು ಅಧ್ಯಯನ ಮಾಡಲು ಇವರು ನಿರ್ಧರಿಸಿದ್ದು, ಬೇರೆ ದಿನಗಳಲ್ಲಿ ಇಷ್ಟೊಂದು ಮಂದಿ ಸ್ಪರ್ಧಾರ್ಥಿಗಳು ಈ ಸ್ಥಳದಲ್ಲಿ ಕಂಡುಬರುವುದಿಲ್ಲ ಎಂದು ತಿಳಿದುಬಂದಿದೆ.
ಬಿಹಾರದಲ್ಲಿ ಬಹುಪಾಲು ಮಂದಿ ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಎಂಬುವವರು ಟ್ವೀಟ್ ಮಾಡಿ 'ಪಾಟ್ನಾದ ಅನೇಕ ಸಾರ್ವಜನಿಕ ಉದ್ಯಾನವನಗಳಲ್ಲಿಯೂ ಇಂಥಹದ್ದೇ ದೃಶ್ಯಗಳು ಕಂಡುಬರುತ್ತವೆ ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯೆ ನೀಡಿ, ಒಬ್ಬ ವ್ಯಕ್ತಿಗೆ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸರ್ಕಾರಿ ಕೆಲಸ ಮಾತ್ರ ಸಾಕಾಗುವುದಿಲ್ಲ. ಮುಂದುವರೆದ ತಂತ್ರಜ್ಞಾನಕ್ಕೂ ಅಪ್ಡೇಟ್ ಆಗಬೇಕೆಂದು ಸಲಹೆ ನೀಡಿದ್ದಾರೆ. ಫೋಟೋ ಇರುವ ಟ್ವೀಟ್ಗೆ 6000ಕ್ಕೂ ಹೆಚ್ಚು ಲೈಕ್ಗಳನ್ನು ಮತ್ತು 500ಕ್ಕೂ ಹೆಚ್ಚು ರೀಟ್ವೀಟ್ಗಳನ್ನು ಗಳಿಸಿದೆ. ಇನ್ನೂ ಕೆಲವರು ಇದೊಂದು ಅದ್ಭುತ ಚಿತ್ರ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ ನನಗೆ ಮನೆಯಲ್ಲಿ ಓದಲು ಸಾಧ್ಯವಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಕಾರ್ತಿ ಪಿ ಚಿದಂಬರಂ ಪ್ರಶಂಸೆ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಈ ರೀತಿಯಾಗಿ ಅಧ್ಯಯನ ಮಾಡಿರುವುದು ಪ್ರಶಂಸೆಗೆ ಅರ್ಹವಾಗಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಪಿ ಚಿದಂಬರಂ ಹೇಳಿದ್ದಾರೆ. ಯುವ ಭಾರತವನ್ನು ಈ ಫೋಟೋ ತೋರಿಸುತ್ತದೆ. ಇದರ ಜೊತೆಗೆ ಬಿಹಾರ ರಾಜ್ಯದ ವೈಫಲ್ಯವನ್ನು ಬಹಿರಂಗಪಡಿಸುತ್ತದೆ. ಬಡತನವನ್ನು ರೋಮ್ಯಾಂಟಿಕ್ ಆಗಿ ಬಿಂಬಿಸಬೇಡಿ, ಬಡತನ ಅತ್ಯಂತ ಕ್ರೂರವಾಗಿದೆ ಅಂತಾ ಕಾರ್ತಿ ಹೇಳಿದ್ದಾರೆ. ಮೂಲಗಳ ಪ್ರಕಾರ, ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗಾಗಿ ಪ್ರತಿ ಶನಿವಾರ ಮತ್ತು ಭಾನುವಾರದಂದು ಈ ಸ್ಥಳದಲ್ಲಿ ಉಚಿತ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಸ್ಪರ್ಧಾರ್ಥಿಗಳು ಭಾಗವಹಿಸುತ್ತಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಆರೋಪ: ರ್ಯಾಂಕ್ ಪಡೆದಿದ್ದ ಕಲಬುರಗಿಯ ಅಭ್ಯರ್ಥಿ ಸಿಐಡಿ ವಶಕ್ಕೆ