ಕರ್ನಾಲ್(ಹರಿಯಾಣ): ವಿವಾಹಿತ ಮಹಿಳೆ ಹಾಗೂ ಅಪ್ರಾಪ್ತನನ್ನು ಥಳಿಸಿ, ಚಪ್ಪಲಿ ಹಾರ ಹಾಕಿಸಿ ಊರಲ್ಲಿ ಮೆರವಣಿಗೆ ಮಾಡಿಸಿದ ಘಟನೆ ಹರಿಯಾಣದ ಕರ್ನಾಲ್ ಜಿಲ್ಲೆಯ ದನಿಯಲ್ಪುರ ಗ್ರಾಮದಲ್ಲಿ ನಡೆದಿದೆ.
ವಿವಾಹಿತ ಮಹಿಳೆ ಬಂಜಾರ ಸಮುದಾಯಕ್ಕೆ ಸೇರಿದ್ದು, ಅಪ್ರಾಪ್ತ ವಾಲ್ಮೀಕಿ ಸಮುದಾಯವನಾಗಿದ್ದು, ಅಪ್ರಾಪ್ತನನ್ನು ಕೊಲ್ಲುವ ನಿರ್ಧಾರಕ್ಕೂ ಬರಲಾಗಿತ್ತು ಎಂದು ತಿಳಿದು ಬಂದಿದೆ.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸ್ಥಳೀಯರು ಅಪ್ರಾಪ್ತನನ್ನು ಕೊಲ್ಲಲು ಮುಂದಾಗಿದ್ದರು. ಆದರೆ ನಂತರದಲ್ಲಿ ಮಾರಣಾಂತಿಕವಾಗಿ ಹೊಡೆದು ಬುದ್ಧಿ ಕಲಿಸುವ ನಿರ್ಧಾರ ಮಾಡಿದ್ದರು.
ವಿವಾಹಿತ ಮಹಿಳೆಗೆ ಎರಡು ಮಕ್ಕಳಿದ್ದಾರೆ. ಬಂಜಾರ ಸಮುದಾಯದವರೇ ಸದ್ಯ ಇಬ್ಬರನ್ನೂ ಥಳಿಸಿ ಊರಲ್ಲಿ ಮೆರವಣಿಗೆ ಮಾಡಿದ್ದಾರೆ. ಹುಡುಗ ಪಿಯುಸಿಯಲ್ಲಿ ಓದುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇಲಾಖೆ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಪಂಚಾಯತ್ಗಳು ಪ್ರಬಲವಾಗಿದ್ದು, ಇಂತಹ ಘಟನೆಗಳು ಆಗಿದ್ದಾಗ್ಗೆ ವರದಿಯಾಗುತ್ತಲೆ ಇರುತ್ತವೆ.