ಮುಂಬೈ: ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ರಾಜಕಾರಣ ಪ್ರತಿ ಕ್ಷಣವೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸರ್ಕಾರ ರಚನೆ ಮಾಡಲು ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಶಿವಸೇನೆಗೆ ಆಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಬಿಜೆಪಿ-ಶಿವಸೇನೆ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿದೆ. ಶಿವಸೇನಾ ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಅರವಿಂದ್ ಸಾವಂತ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದೇ ವೇಳೇ ಮಾತನಾಡಿರುವ ಅವರು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಯಾಗಲಿದ್ದು, ಚುನಾವಣೆಗೂ ಮುಂಚಿತವಾಗಿ ಬಿಜೆಪಿ ನಮ್ಮೊಂದಿಗೆ ಮಾಡಿಕೊಂಡಿದ್ದ ಸೂತ್ರದಂತೆ ನಡೆದುಕೊಳ್ಳದೇ ಮೋಸ ಮಾಡಿದೆ ಎಂದು ದೂರಿದರು.
ಈಗಾಗಲೇ ಎನ್ಸಿಪಿ ಮುಖಂಡ ಶರದ್ ಪವಾರ್ ಜತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಹತ್ವದ ಮಾತುಕತೆ ನಡೆಸಿದ್ದು, ಸಂಜೆ ಕಾಂಗ್ರೆಸ್ ಸಹ ಸಭೆ ಸೇರಲು ನಿರ್ಧರಿಸಿದೆ. ಇದಾದ ಬಳಿಕ ಮೂರು ಪಕ್ಷಗಳು ಸೇರಿ ಮಹತ್ವದ ನಿರ್ಧಾರ ಹೊರಹಾಕುವ ಸಾಧ್ಯತೆ ದಟ್ಟವಾಗಿದೆ. 288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105,ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಆಸ್ಪತ್ರೆಗೆ ರಾವತ್ ದಾಖಲು: ಮಹಾರಾಷ್ಟ್ರದ ರಾಜಕೀಯ ಜಟಾಪಟಿ ನಡುವೆ ಶಿವಸೇನೆ ಮುಖಂಡ ಸಂಜಯ್ ರಾವತ್ ಆಸ್ಪತ್ರೆಗೆ ದಾಖಲಾಗಿದ್ದು, ಲಿಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.