ಉತ್ತರಾಖಂಡ್(ಡೆಹ್ರಾಡೂನ್): ದೇಶ ಪ್ಲಾಸ್ಟಿಕ್ ಮುಕ್ತವಾಗಬೇಕೆಂಬುದು ಪ್ರತಿಯೊಬ್ಬರ ಇರಾದೆ. ಆದ್ರೆ ಅದಕ್ಕಾಗಿ ನಿರಂತರ ಪ್ರಯತ್ನಗಳು ನಡೆಯೋದು ತುಂಬಾ ಕಡಿಮೆ. ದೇಶದ ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಸ್ವಚ್ಛತೆಯ ಪ್ರಯತ್ನವಿದ್ದರೆ, ಭಾರತ ನಿಸ್ಸಂಶಯವಾಗಿ ಸ್ವಚ್ಛ ಭಾರತವಾಗಬಹುದು. ಇದಕ್ಕೆ ಉತ್ತರಾಖಂಡ್ನ ಈ ಕಾಲೊನಿ ಸಾಕ್ಷಿಯಾಗಿದೆ. ಈ ಕುರಿತ ವಿಶೇಷ ವರದಿ ನೋಡಿ.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಿಂದ ಪ್ರಭಾವಿತರಾದ ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ನ ಈ ಕಾಲೊನಿಯ ಜನರು ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಇಡೀ ಕಾಲೊನಿಯನ್ನು ಸ್ವಚ್ಛವಾಗಿಡಲು ತಮ್ಮದೇ ಆದ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಈ ಐಡಿಯಾ ಈಗ ರಾಷ್ಟ ಮಟ್ಟದಲ್ಲಿ ಗಮನ ಸೆಳೆದಿದೆ.
ಕೇವಲ್ ವಿಹಾರ್ ಕಾಲೊನಿ ಜನರಿಂದ ಸ್ವಚ್ಛತೆ ಪಾಠ
ಡೆಹ್ರಾಡೂನ್ನ ಕೇವಲ್ ವಿಹಾರ್ ಕಾಲೊನಿ ಸಮಗ್ರ ತ್ಯಾಜ್ಯ ವಿಂಗಡಣೆ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಪ್ರಯತ್ನ ಮಾಡುತ್ತಿದೆ. ಇಲ್ಲಿನ ಜನರು ಮಣ್ಣಿನಲ್ಲಿ ಕರಗದೆ ಸುತ್ತಲಿನ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮುಕ್ತ ಕಾಲೊನಿ ನಿರ್ಮಿಸಲು ಪಣ ತೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿ ಮನೆಯ ಸದಸ್ಯರೂ ಒಂದೇ ಮನಸ್ಥಿತಿಯೊಂದಿಗೆ ಕೈ ಜೋಡಿಸುತ್ತಿದ್ದಾರೆ. ಇಲ್ಲಿನ ಪ್ರತಿ ಮನೆಯ ಜನರೂ ಹಸಿ ಕಸ ಮತ್ತು ಒಣ ಕಸವೆಂದು, ಕಸವನ್ನು ಸಮಗ್ರವಾಗಿ ವಿಂಗಡಿಸುತ್ತಾರೆ. ಇದರಲ್ಲಿ ಹಸಿಕಸವನ್ನು ಒಟ್ಟು ಸೇರಿಸಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ.
ಹಸಿ ಕಸವನ್ನೇನೋ ಕಾಂಪೋಸ್ಟ್ ಮೂಲಕ ಗೊಬ್ಬರವಾಗಿ ಸದ್ಬಳಕೆ ಮಾಡಲಾಗುತ್ತದೆ. ಆದ್ರೆ, ಒಣ ಕಸಕ್ಕೆ ಪರ್ಯಾಯ ವ್ಯವಸ್ಥೆ ಇದೆಯೇ?. ಖಂಡಿತಾ ಇದೆ. ಇಲ್ಲಿನ ಮನೆಗಳಿಂದ ಸಂಗ್ರಹವಾಗುವ ಏಕಬಳಕೆ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸಿ ಅದನ್ನು ರಸ್ತೆ ನಿರ್ಮಾಣಕ್ಕೆ ಮರುಬಳಕೆ ಮಾಡಲಾಗುತ್ತಿದೆ. ಭಾರತೀಯ ಪೆಟ್ರೋಲಿಯಂ ಸಂಸ್ಥೆಗೆ ಡಿಸೇಲ್ ನಿರ್ಮಾಣಕ್ಕೆ ಬೇಕಾದ ಕಚ್ಛಾ ವಸ್ತುವಾಗಿಯೂ ಈ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಳುಹಿಸಲಾಗುತ್ತದೆ.
ಕಾಲೊನಿಯ ಸ್ವಚ್ಛತೆಗೆ ಸಿಕ್ಕಿದೆ ಸ್ಮಾರ್ಟ್ ಸಿಟಿ ಯೋಜನೆಯ ಪುರಸ್ಕಾರ:
ಡೆಹ್ರಾಡೂನ್ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಲೊನಿಯನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಂಡ ಹಿನ್ನೆಲೆಯಲ್ಲಿ ಕೇವಲ್ ವಿಹಾರ್ ಕಾಲೊನಿಗೆ ಪ್ರಥಮ ಬಹುಮಾನವನ್ನು ನೀಡಲಾಗಿದೆ.
ಶೂನ್ಯ ತ್ಯಾಜ್ಯ ವಲಯದತ್ತ ಕೇವಲ್ ವಿಹಾರ್ ಕಾಲೊನಿ:
ಇನ್ನೊಂದೆಡೆ ಈ ಕಾಲೊನಿಯ ಜನರು ಹಳೆ ಬೆಡ್ಶೀಟ್ ಹಾಗೂ ಕಿಟಕಿ ಪರದೆಗಳಿಂದ ಬಟ್ಟೆ ಚೀಲಗಳನ್ನು ತಯಾರಿಸಿ ಅವುಗಳನ್ನು ಅಂಗಡಿಗಳಿಗೆ ಹಾಗೂ ತರಕಾರಿ ವ್ಯಾಪಾರಸ್ಥರಿಗೆ ಹಂಚುತ್ತಿದ್ದಾರೆ. ಈ ಮೂಲಕ ಪ್ಲಾಸ್ಟಿಕ್ ವಸ್ತುಗಳಿಗೆ ವಿದಾಯ ಹೇಳಿ ಕಾಲೊನಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಜೊತೆಗೆ, ಶೂನ್ಯ ತ್ಯಾಜ್ಯ ವಲಯವನ್ನಾಗಿಸುವ ನಿಟ್ಟಿನಲ್ಲಿ ಕಾಲೊನಿ ಜನತೆ ಕಾರ್ಯಪ್ರವೃತ್ತರಾಗಿದ್ದಾರೆ.
ಪ್ರಯತ್ನವಿದ್ದರೆ ಒಂದು ಸಣ್ಣ ಪ್ರದೇಶವಷ್ಟೇ ಅಲ್ಲ. ಒಂದು ಕಾಲೊನಿ, ನಗರ, ಜಿಲ್ಲೆ, ರಾಜ್ಯ ಎಂದು ಇಡೀ ದೇಶವನ್ನೇ ಪ್ಲಾಸ್ಟಿಕ್ ಮುಕ್ತವಾಗಿಸಬಹುದು. ಇದಕ್ಕೆ ಪ್ರತಿ ಕೈಗಳೂ ಒಟ್ಟು ಸೇರುವುದು ತುಂಬ ಮುಖ್ಯ. ಈ ನಿಟ್ಟಿನಲ್ಲಿ ಕೇವಲ್ ವಿಹಾರ್ ಕಾಲೊನಿ ಮುಂಚೂಣಿಯಲ್ಲಿದೆ. ಅಂತೆಯೇ ದೇಶದ ಪ್ರತಿ ಕಾಲೊನಿಗಳು ಶೂನ್ಯ ತ್ಯಾಜ್ಯ ವಲಯವಾಗುವತ್ತ ಚಿತ್ತ ಹರಿಸಬೇಕಿದೆ.