ಆಗ್ರಾ(ಉತ್ತರ ಪ್ರದೇಶ): ಉತ್ತರ ಭಾರತದಲ್ಲಿ ಸಂಭವಿಸಿದ ಚಂಡಮಾರುತದ ಪರಿಣಾಮ ಉಂಟಾದ ಭಾರಿ ಬಿರುಗಾಳಿ, ಮಳೆ ಮತ್ತು ಸಿಡಿಲಿನಿಂದಾಗಿ ವಿಶ್ವ ವಿಖ್ಯಾತ ತಾಜ್ಮಹಲ್ ಹಾನಿಗೊಳಗಾಗಿದೆ.
ತಾಜ್ಮಹಲ್ನ ವಿವಿಧ ಭಾಗಗಳು ಬಿರುಕು ಬಿಟ್ಟಿದ್ದು, ಆರ್ಕಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಮಹಾನಿರ್ದೇಶಕರು ಮತ್ತು ಪರಿಶೀಲನಾ ಪುರಾತತ್ವ ಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣಕರ್ ಸೇರಿದಂತೆ ಇತರೆ ಅಧಿಕಾರಿಗಳು ತಾಜ್ ಮಹಲ್ ಗೆ ತೆರಳಿ ಹಾನಿ ಕುರಿತು ಪರಿಶೀಲನೆ ನಡೆಸಿದ್ದಾರೆ.

ತಾಜ್ಮಹಲ್ನ ಮುಖ್ಯ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಯಮುನಾ ತೀರದ ಅಮೃತಶಿಲೆ ಬಳಸಿ ನಿರ್ಮಿಸಿದ್ದ ರೇಲಿಂಗ್ಗಳು ಮುರಿದು ಬಿದ್ದಿವೆ. ಇದರ ಕೆಳಗೆ ನಿರ್ಮಿಸಿದ್ದ ಕೆಂಪು ಕಲ್ಲಿನ ಜಾಲರಿ ಸಹ ಮುರಿದಿದೆ. ಒಟ್ಟು ಸುಮಾರು 30 ಲಕ್ಷ ರೂ. ಮೌಲ್ಯದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ ಕೂಡ ಉಂಟಾದ ಚಂಡಮಾರುತಗಳಿಂದಾಗಿ ಹಲವು ಬಾರಿ ತಾಜ್ಮಹಲ್ ಹಾನಿಗೊಳಗಾಗಿದೆ. ತಾಜ್ಮಹಲ್ ಜೊತೆಗೆ ಆಗ್ರಾ ಕೋಟೆ, ಮೆಹ್ತಾಬ್ ಬಾಗ್, ಸಿಕಂದರ್ ಮತ್ತು ಫತೇಪುರ್ ಸಿಕ್ರಿಗಳಲ್ಲಿ ಕೂಡ ಹಾನಿ ಸಂಭವಿಸಿದ್ದು, ಇವುಗಳ ದುರಸ್ತಿಗೆ ಸುಮಾರು 1 ತಿಂಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
