ಶ್ರೀನಗರ (ಜಮ್ಮು ಕಾಶ್ಮೀರ) : ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ನಗರದಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಸಿನೆಮಾ ಮಂದಿರವೊಂದು ನಿರ್ಮಾಣವಾಗುತ್ತಿದೆ. ಇದು ಕಾಶ್ಮೀರದ ಮನೋರಂಜನಾ ಕೇಂದ್ರವಾಗಿ ಪರಿವರ್ತನೆಯಾಗಲಿದೆ.
ನಗರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಈ ಹಿಂದೆ ಬ್ರಾಡ್ವೇ ಚಿತ್ರ ಮಂದಿರವಿದ್ದ ಸ್ಥಳದಲ್ಲೇ ಉದ್ಯಮಿ ವಿಜಯ್ ಧಾರ್ ಹೊಸ ಬ್ರಾಡ್ವೇ ಚಿತ್ರ ಮಂದಿರದ ನಿರ್ಮಾಣ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಚಿತ್ರ ಮಂದಿರದಲ್ಲಿ ಎರಡು ಪರದೆಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಮಾರ್ಚ್ 2023 ರಲ್ಲಿ ಸಾರ್ವಜನಿಕರಿಗೆ ಮನೋರಂಜನೆ ನೀಡಲು ಮುಕ್ತವಾಗಲಿದೆ ಎಂದು ವಿಜಯ್ ಧಾರ್ ಹೇಳಿದ್ದಾರೆ.
ಜಮ್ಮುವಿನ ಮಕ್ಕಳು ಹೊಂದಿರುವ ಎಲ್ಲ ಸೌಲಭ್ಯಗಳನ್ನು ಕಾಶ್ಮೀರದ ಮಕ್ಕಳಿಗೆ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಜಮ್ಮುವಿನ ಮಗುವಿಗೆ ಸಿನೆಮಾ ಹಾಲ್ನಲ್ಲಿ ಚಲನಚಿತ್ರ ನೋಡಲು ಸಾಧ್ಯವಾದರೆ ಇಲ್ಲಿ ಯಾಕೆ ಇರಬಾರದು ಎಂದು ವಿಜಯ್ ಧಾರ್ ಪ್ರಶ್ನಿಸಿದ್ದಾರೆ. ಚಿತ್ರ ಮಂದಿರ ನಿರ್ಮಾಣ ಮಾಡುತ್ತಿರುವಾಗ ಒಂದು ಸಲ ಬೆಂಕಿ ಅವಘಡ ಸಂಭವಿಸಿತ್ತು, ಆದರೂ ಅದೇ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮುಂದುವರೆಸಲಾಗಿದೆ.
1990 ರ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಿಂಸಾಚಾರ ಪ್ರಾರಂಭವಾದಾಗ, ಉಗ್ರಗಾಮಿ ಸಂಘಟನೆಗಳು ಚಿತ್ರ ಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಿದ ಹಿನ್ನೆಲೆ ಪ್ರಮುಖ ಪಟ್ಟಣಗಳ ಎಲ್ಲ ಸಿನೆಮಾ ಮಂದಿರಗಳನ್ನು ಮುಚ್ಚಲಾಯಿತು. ರೀಗಲ್, ಪಲ್ಲಾಡಿಯಮ್, ಖಯಾಮ್, ಫಿರ್ದೌಸ್, ಷಾ ಸಿನೆಮಾ, ನೀಲಂ, ಶಿರಾಜ್, ಖಯಾಮ್ ಮತ್ತು ಬ್ರಾಡ್ವೇ ಚಿತ್ರಮಂದಿರಗಳನ್ನು 1990 ರ ದಶಕದ ಆರಂಭದಲ್ಲಿ ಮುಚ್ಚಲಾಗಿತ್ತು.
ಷಾ ಸಿನೆಮಾ, ಶಿರಾಜ್, ಪಲ್ಲಾಡಿಯಮ್ ಮತ್ತು ಫಿರ್ದೌಸ್ನಂತಹ ಕೆಲವು ಚಿತ್ರ ಮಂದಿರಗಳ ಕಟ್ಟಡಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡವು. ಉಗ್ರವಾದಿಗಳ ವಿರುದ್ಧದ ಹೋರಾಟಕ್ಕಾಗಿ ಅವುಗಳನ್ನು ತಾತ್ಕಾಲಿಕ ಪ್ರಧಾನ ಕಚೇರಿಗಳನ್ನಾಗಿ ಪರಿವರ್ತಿಸಲಾಯಿತು.
ಪ್ರಮುಖ ಕಾಶ್ಮೀರಿ ಪಂಡಿತ್ ರಾಜಕಾರಣಿ ಮತ್ತು ಇಂದಿರಾ ಗಾಂಧಿ ಸರ್ಕಾರದಲ್ಲಿ ಸಚಿವರಾಗಿದ್ದ ದಿವಂಗತ ಡಿ.ಪಿ ಧಾರ್ ಅವರ ಪುತ್ರ ಉದ್ಯಮಿ ವಿಜಯ್ ಧಾರ್ ಪ್ರಸ್ತುತ ಚಿತ್ರ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ.
ಉಗ್ರವಾದಿಗಳ ಉಪಟಳ ಪ್ರಾರಂಭವಾದ ಬಳಿಕ ಕಣಿವೆ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಶ್ರೀನಗರದ ಅಥ್ವಜಾನ್ ಹೊರ ವಲಯದಲ್ಲಿ ಡಿಪಿಎಸ್ ಶಾಲೆಯನ್ನೂ ಪ್ರಾರಂಭಿಸಿದ್ದಾರೆ. ಸದ್ಯ ಇದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ.
ದಿವಗಂತ ಡಿ.ಪಿ ಧಾರ್ ಅವರು ಇಂದಿರಾ ಗಾಂಧಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅಲ್ಲದೇ, 1947 ರ ಮುಹಮ್ಮದ್ ಅಬ್ದುಲ್ಲಾ ಅವರ ಸರ್ಕಾರದಲ್ಲಿ ಕಾಶ್ಮೀರದ ಉಪಮುಖ್ಯ ಮಂತ್ರಿಯಾಗಿದ್ದರು.