ಜೈಸಲ್ಮೇರ್ (ರಾಜಸ್ಥಾನ) : ಭಿನ್ನಮತೀಯ ಶಾಸಕರು ಪಕ್ಷದ ನಾಯಕರೊಂದಿಗೆ ಸಂವಾದ ನಡೆಸಲು ಬಯಸಿದರೆ ಬಿಜೆಪಿಯ ಆತಿಥ್ಯ ಮತ್ತು ಹರಿಯಾಣ ಪೊಲೀಸರ ಭದ್ರತೆ ತ್ಯಜಿಸಬೇಕು ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲಾ ಮಂಗಳವಾರ ಹೇಳಿದರು.
ಭಿನ್ನಮತೀಯರಿಗೆ ಪಕ್ಷದಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಗುರುಗ್ರಾಮ್ ಜಿಲ್ಲೆಯ ಮನೇಸರ್ನಲ್ಲಿ ಹರಿಯಾಣ ಪೊಲೀಸರ ಭದ್ರತೆ ಬಿಟ್ಟು ಬರಬೇಕು. ಬಿಜೆಪಿ ಸ್ನೇಹವನ್ನೂ ಸಹ ತೊರೆಯಬೇಕು. ಹಾಗೆ ಮಾಡಿದರೆ ಮಾತ್ರ ಪಕ್ಷದೊಂದಿಗೆ ಮಾತುಕತೆ ನಡೆಸಲು ಅವಕಾಶ ದೊರೆಯಲಿದೆ ಎಂದರು.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರ ಹಸ್ತಕ್ಷೇಪ ಅನ್ಯಾಯವಾಗಿದೆ. ಯಾಕೆಂದರೆ, ಅದು ಮಹಾರಾಷ್ಟ್ರ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಸುಮ್ಮನೆ ಬಿಹಾರ ಪೊಲೀಸರು ಮೂಗು ತೂರಿಸಬಾರದಿತ್ತು. ಇಂತಹ ಪರಿಸ್ಥಿತಿ ಅರಾಜಕತೆಗೆ ಕಾರಣವಾಗಬಹುದು ಎಂದು ಅವರು ಹೇಳಿದರು.