ನವದೆಹಲಿ: ಮಹತ್ವದ ರಾಜತಾಂತ್ರಿಕ ಮತ್ತು ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರವೀಶ್ ಕುಮಾರ್ ಅವರನ್ನು ಫಿನ್ಲೆಂಡ್ಗೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
1995 ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದ ರವೀಶ್ ಕುಮಾರ್ ಜುಲೈ 2017 ರಿಂದ 2020ರ ಏಪ್ರಿಲ್ವರೆಗೆ ಎಂಇಎ ವಕ್ತಾರರಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಬಾಲಕೋಟ್ ದಾಳಿ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಡಳಿತ ಪ್ರದೇಶ ಘೋಷಣೆ ಹಲವಾರು ಸೂಕ್ಷ್ಮ ವಿಷಯಗಳ ಬಗ್ಗೆ ಭಾರತದ ನಿಲುವನ್ನು ಚತುರತೆಯಿಂದ ನಿಭಾಯಿಸಿದ್ದರು.
ರವೀಶ್ ಕುಮಾರ್ ಎಂಇಎ ವಕ್ತಾರರಾಗುವ ಮೊದಲು ಫ್ರಾಂಕ್ಫರ್ಟ್ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ವೃತ್ತಿಜೀವನವನ್ನು ಜಕಾರ್ತಾದ ಇಂಡಿಯನ್ ಮಿಷನ್ನಲ್ಲಿ ಪ್ರಾರಂಭಿಸಿದ್ದ ಅವರು, ನಂತರ ಥಿಂಪು ಮತ್ತು ಲಂಡನ್ನಲ್ಲಿ ಸಹ ಸೇವೆ ಸಲ್ಲಿಸಿದ್ದರು. ಆದಷ್ಟು ಬೇಗ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಎಂಇಎ ತಿಳಿಸಿದೆ.
ಸುಮಾರು 25 ವರ್ಷಗಳ ವೃತ್ತಿಜೀವನದಲ್ಲಿ, ರವೀಶ್ ಕುಮಾರ್ ದೆಹಲಿಯ ಎಂಇಎ ಕೇಂದ್ರ ಕಚೇರಿಯಲ್ಲಿದ್ದ ವೇಳೆ ಪೂರ್ವ ಏಷ್ಯಾದ ಮರ್ಜಿಯನ್ನೂ ನೊಡಿಕೊಂಡಿದ್ದರು. ಜಕಾರ್ತಾದ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಅವರು ಆಗಸ್ಟ್ 2013 ರಿಂದ ಜುಲೈ 2017 ರವರೆಗೆ ಫ್ರಾಂಕ್ಫರ್ಟ್ನಲ್ಲಿ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡರು.
ಫಿನ್ಲೆಂಡ್ನಲ್ಲಿ ಅವರು ವಾಣಿ ರಾವ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಯುರೋಪಿನಲ್ಲಿ ಫಿನ್ಲೆಂಡ್ನಲ್ಲಿ ಭಾರತದ ಪ್ರಮುಖ ಮಿತ್ರನಾಗಿದ್ದು, ಕಳೆದ ಕೆಲವು ವರ್ಷಗಳಿಂದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಪ್ರಗತಿಯಲ್ಲಿದೆ.
ಐಟಿ, ಆರೋಗ್ಯ ರಕ್ಷಣೆ, ಆತಿಥ್ಯ ಮತ್ತು ವಾಹನ ಕ್ಷೇತ್ರಗಳಲ್ಲಿ ಸುಮಾರು 35 ಭಾರತೀಯ ಕಂಪನಿಗಳು ಫಿನ್ಲೆಂಡ್ನಲ್ಲಿ ಹೂಡಿಕೆ ಮಾಡಿದ್ದರೆ, 100 ಕ್ಕೂ ಹೆಚ್ಚು ಫಿನ್ನಿಷ್ ಕಂಪನಿಗಳು ಭಾರತದಲ್ಲಿ ಇಂಧನ, ಜವಳಿ, ವಿದ್ಯುತ್ ಸ್ಥಾವರಗಳು ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.