ವೆಲ್ಲೂರು(ತ.ನಾಡು): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ಆರೋಪಿ ನಳಿನಿ ಹಾಗೂ ಆಕೆಯ ಪತಿ ವಿ.ಶ್ರೀಹರನ್ ಅಲಿಯಾಸ್ ಮುರುಗನ್ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.
ಇದೇ ವರ್ಷದ ಆರಂಭದಲ್ಲಿ ಎಲ್ಲ ಏಳು ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ನಳಿನಿ ಮದ್ರಾಸ್ ಹೈಕೋರ್ಟ್ಗೆ ಪತ್ರ ಮುಖೇನ ಮನವಿ ಮಾಡಿದ್ದಳು. 2018ರಲ್ಲಿ ತಮಿಳುನಾಡು ಸರ್ಕಾರ ತನ್ನ ಸಂಪುಟ ಸಭೆಯಲ್ಲಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಶಿಫಾರಸು ಮಾಡಿತ್ತು. ಇದರ ಆಧಾರದಲ್ಲಿ ನಳಿನಿ ಬಿಡುಗಡೆ ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಆದರೆ ಈ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು.
ವೆಲ್ಲೂರಿನ ವಿಶೇಷ ಮಹಿಳಾ ಜೈಲಿನಲ್ಲಿ ಬಂಧಿಯಾಗಿರುವ ನಳಿನಿ, ರಾಜೀವ್ ಗಾಂಧಿ ಹತ್ಯೆಯ ಏಳು ಆರೋಪಿಗಳಲ್ಲಿ ಓರ್ವರು. ಜೈಲುವಾಸಿಯಾಗಿರುವ ನಳಿನಿ ಸದ್ಯ ಪ್ರಧಾನಿ ಮೋದಿ ಹಾಗೂ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮ್ರೇಶ್ವರ್ ಪ್ರತಾಪ್ ಸಾಹಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾಳೆ.
ಎ.ಜಿ. ಪೆರಾರಿವಾಲನ್, ವಿ.ಶ್ರೀಹರನ್ ಅಲಿಯಾಸ್ ಮುರುಗನ್, ಟಿ. ಸುತೇಂದ್ರರಾಜ ಅಲಿಯಾಸ್ ಸಂತನ್, ಜಯಕುಮಾರ್, ರಾಬರ್ಟ್ ಪಯಾಸ್, ರವಿಚಂದ್ರನ್ ಹಾಗೂ ನಳಿನಿ ಶ್ರೀಹರನ್ 1991ರಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. 21 ಮೇ 1991ರಂದು ಆತ್ಮಾಹುತಿ ಮಹಿಳಾ ಬಾಂಬರ್ ರಾಜೀವ್ ಗಾಂಧಿ ಅವರನ್ನ ಚೆನ್ನೈ ಸಮೀಪದ ಪೆರಂಬದೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ವೇಳೆ ಸ್ಫೋಟಿಸಿಕೊಂಡು ಹತ್ಯೆ ಮಾಡಿಕೊಂಡಿದ್ದಳು.