ನವದೆಹಲಿ: ಟೆಲಿಕಾಂ ಮಾರುಕಟ್ಟೆಯ ಪೈಪೋಟಿ ತಡೆಯಲಾಗದೆ ತತ್ತರಿಸಿರುವ ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆ 'ಭಾರತ್ ಸಂಚಾರ ನಿಗಮ ಲಿಮಿಟೆಡ್' (ಬಿಎಸ್ಎನ್ಎಲ್) 'ಆರ್ಥಿಕ ಸಂಕಷ್ಟ ನೆಪದಡಿ ಮುಚ್ಚುವ ಪ್ರಸ್ತಾಪವಿಲ್ಲ. ಅದರ ಪುನರುಜ್ಜೀವನಕ್ಕೆ ಯತ್ನಿಸಲಾಗುತ್ತಿದೆ' ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್, 'ಬಿಎಸ್ಎನ್ಎಲ್ ಮತ್ತು ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್ (ಎಂಟಿಎನ್ಎಲ್) ಯಾವುದೇ ಕಾರಣಕ್ಕೂ ಮುಚ್ಚುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಅವುಗಳ ಪುನರುಜ್ಜೀವನಕ್ಕೆ ಅಗತ್ಯವಾದ ಪ್ರಯತ್ನ ನಡೆಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ಅಹಮಾದಾಬಾದ್ ಹಾಗೂ ಎಂ/ಎಸ್ ಡೆಲಾಯ್ಟ್ ಸಂಸ್ಥೆಗಳ ಸಹಾಯದಿಂದ ನಷ್ಟದಲ್ಲಿ ಸಾಗುತ್ತಿರುವ ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ಳಗ ಪುನಶ್ಚೇತನಕ್ಕೆ ಮಾರ್ಗಸೂಚಿ ತಯಾರಿಸುವಂತೆ ಕೋರಿದ್ದೇವೆ. ಆ ಸಂಸ್ಥೆಗಳು ನೀಡುವ ಶಿಫಾರಸುಗಳ ಅನುಗುಣವಾಗಿ ಪುನರುಜ್ಜೀವನದ ತಯಾರಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಸುಮಾರು 1.76 ಲಕ್ಷ ಉದ್ಯೋಗಿಗಳಿದ್ದು, ಮಾಸಿಕ ವೇತನ ಸರಿಯಾಗಿ ಪಾವತಿ ಆಗುತ್ತಿಲ್ಲವೆಂದು ಆಪಾದಿಸುತ್ತಿದ್ದಾರೆ. ಬಿಎಸ್ಎನ್ಎಲ್ 2017-18ರಲ್ಲಿ ₹ 8,000 ಕೋಟಿ ನಷ್ಟಕ್ಕೀಡಾಗಿತ್ತು. ಎಂಟಿಎನ್ಎಲ್ ₹ 3,000 ಕೋಟಿ ನಷ್ಟ ಅನುಭವಿಸತ್ತು. ಉಭಯ ಕಂಪನಿಗಳಿಗೆ ಉದ್ಯೋಗಿಗಳ ವೇತನ ವಿತರಣೆಯೇ ದೊಡ್ಡ ಮೊತ್ತವಾಗುತ್ತಿದೆ. ಬಿಎಸ್ಎನ್ಎಲ್ ತನ್ನ ಒಟ್ಟು ಆದಾಯದಲ್ಲಿ ಶೇ. 65ರಿಂದ 70ರಷ್ಟನ್ನು ಸಿಬ್ಬಂದಿ ವೇತನಕ್ಕೆ ಪಾವತಿಸುತ್ತಿದೆ.