ನವದೆಹಲಿ: ಭಾರತವನ್ನು ಮತ್ತಷ್ಟು ತಲ್ಲಣಗೊಳಿಸಲು ಕಾರಣವಾಗಿದ್ದು ನಿಜಾಮುದ್ಧೀನ್ನಲ್ಲಿ ನಡೆದ ಧಾರ್ಮಿಕ ಸಭೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯಾ ರಾಜ್ಯಗಳಿಗೆ ತೆರಳಿದ ಮುಸ್ಲಿಮರಲ್ಲಿ 150ಕ್ಕೂ ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನೂ ಹಲವಾರು ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ಲಾಕ್ಡೌನ್ ಆದೇಶ ಉಲ್ಲಂಘಿಸಿ ಸಭೆ ನಡೆಸಿದ ತಬ್ಲಿಘಿ ಜಮಾತ್ ಮುಖ್ಯಸ್ಥ ಮೊಹಮ್ಮದ್ ಸಾದ್ ಕಂಧಲ್ವಿ ಮತ್ತು ಇತರ ಆರು ಜನರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈಗ ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೀಗಾಗಿ ಕಂಧಲ್ವಿ ಪರಾರಿಯಾಗಿದ್ದಾನೆ ಎಂಬ ವರದಿಗಳು ಬಿತ್ತರವಾಗುತ್ತಿವೆ.
ಈ ಆರೋಪಗಳನ್ನು ಅಲ್ಲಗಳೆದಿರುವ ತಬ್ಲಿಘಿ ಜಮಾತ್ ಸಂಘಟನೆ, ಕಂಧಲ್ವಿ ಅವರು ದೆಹಲಿ ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದೆ. ಕಂಧಲ್ವಿ ಪರಾರಿಯಾಗಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದು ಪ್ರೇರಿತ ಪ್ರಚಾರ. ದ್ವೇಷದ ಆಧಾರದ ಮೇಲೆ ಸುದ್ದಿಗಳನ್ನು ಬಿತ್ತರಿಸಲಾಗಿದೆ. ಅವು ಸತ್ಯಕ್ಕೆ ದೂರವಾದ ವರದಿಗಳು ಎಂದು ಸಂಘಟನೆ ವಕ್ತಾರ ಮತ್ತು ವಕೀಲ ಶಾಹೀದ್ ಅಲಿ ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸಭೆ ನಡೆಸಲು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಳಿ ಅನುಮತಿ ಕೇಳಿದ್ದೆವು. ಹೀಗಾಗಿ ಅವರ ವಿರುದ್ಧವೇ ಮೊದಲು ಎಫ್ಐಆರ್ ದಾಖಲಿಸಬೇಕು ಎಂದರು.