ಇಸ್ಲಾಮಾಬಾದ್ : ಗೂಢಚರ್ಯೆ ಹಾಗೂ ಭಯೋತ್ಪಾದನೆ ಆಪಾದನೆಯ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಮೂಲದ ಕುಲಭೂಷಣ್ ಜಾಧವ್ ಅವರು, ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ನಿರಾಕರಿಸಿದ್ದಾರೆ. ಬಾಕಿ ಇರುವ ಕ್ಷಮಾದಾನ ಅರ್ಜಿಯೊಡನೆ ಮುಂದುವರಿಯಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
ಅಡಿಷನಲ್ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಾಧವ್ ಅವರು ಈಗಾಗಲೇ ಬಾಕಿ ಇರುವ ಕ್ಷಮಾದಾನ ಅರ್ಜಿಯೊಂದಿಗೆ ಮುಂದುವರಿಯಲು ನಿರ್ಧರಿಸಿದ್ದಾರೆ. ಪಾಕಿಸ್ತಾನ ಅವರಿಗೆ 2ನೇ ಕೌನ್ಸಿಲರ್ ಪ್ರವೇಶ ನೀಡಿದೆ. 2020ರ ಜೂನ್ 17ರಂದು ಶಿಕ್ಷೆ ಹಾಗೂ ಅಪರಾಧದ ವಿವೇಚನೆ ಸಂಬಂಧ ಪರಿಶೀಲನಾ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿತ್ತು. ತಮ್ಮ ಶಿಕ್ಷೆ ಮತ್ತು ಅಪರಾಧದ ಪರಿಶೀಲನೆ ಅರ್ಜಿ ಸಲ್ಲಿಸಲು ನಿರಾಕರಿಸಿದರು ಎಂದು ಹೇಳಿದ್ದಾರೆ.
ಇರಾನ್ನಿಂದ ಪಾಕ್ ಪ್ರವೇಶಿಸಿದ ಆರೋಪದ ಮೇಲೆ ಕುಲಭೂಷಣ್ ಜಾಧವ್ ಅವರನ್ನು 2016ರ ಮಾರ್ಚ್ 3ರಂದು ಪಾಕಿಸ್ತಾನದ ಭದ್ರತಾ ಪಡೆಗಳು ಬಂಧಿಸಿವೆ ಎಂದು ಆರೋಪಿಸಲಾಗಿದೆ. ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಕುಲಭೂಷಣ್ ಜಾಧವ್ ಭಾಗಿಯಾಗಿದ್ದಾರೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ಮೇ ತಿಂಗಳಲ್ಲಿ ಎಎನ್ಐಗೆ ತಿಳಿಸಿವೆ.
2017ರಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಜಾಧವ್ ಪ್ರಕರಣದಲ್ಲಿ ಭಾರತದ ಪರ ತೀರ್ಪು ನೀಡಿತ್ತು. ಐಸಿಜೆ ತೀರ್ಮಾನದ ಜಾರಿಗೆ ತರುವ ಸಂಬಂಧ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಜೊತೆ ಸಂಪರ್ಕ ಮಾಡಲ್ಲಿದ್ದೇವೆ ಎಂದು ಮೂಲಗಳು ತಿಳಿಸಿವೆ.