ಶ್ರೀನಗರ: ರೋಶ್ನಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಪುಲ್ವಾಮಾ ಮಾಜಿ ಜಿಲ್ಲಾಧಿಕಾರಿ ಮೆರಾಜ್ ಕಕ್ರೂ ಸೇರಿದಂತೆ 12 ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.
ಸಿಬಿಐ ಪ್ರಕಾರ, ಕಕ್ರೂ ಮತ್ತು ಇತರ ಅಧಿಕಾರಿಗಳು ಕೆಲವು ಸ್ಥಳೀಯರಿಗೆ ಸರ್ಕಾರಿ ಜಮೀನಿನ ಅಕ್ರಮ ಮಾಲೀಕತ್ವವನ್ನು ನೀಡಿದ್ದರು ಎಂದು ತಿಳಿದುಬಂದಿದೆ. ಈ ಭೂಮಿ ಗುಲಾಮ್ ಅಹ್ಮದ್ ಪಂಡಿತ್, ಗುಲಾಮ್ ನಬಿ ನಾಯ್ಕೊ, ಮುಹಮ್ಮದ್ ಅಮೀನ್ ಪಂಡಿತ್ ಮತ್ತು ಫರ್ಹತ್ ಪಂಡಿತ್, ಅಬ್ದುಲ್ ಮಜೀದ್ ಶೇಖ್ ಮತ್ತು ಗುಲಾಮ್ ರಸೂಲ್ ವಾನಿಗೆ ಸೇರಿದೆ ಎಂದು ಸಿಬಿಐ ತಿಳಿಸಿದೆ.
ಸಿಬಿಐ ಪ್ರಕಾರ, ಕಕ್ರೂ ಮತ್ತು ಇತರ ಅಧಿಕಾರಿಗಳು ಸೇರಿಕೊಂಡು ಅಕ್ರಮ ಆಸ್ತಿ ಹಕ್ಕುಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ರೋಶ್ನಿ ಕಾಯ್ದೆಯನ್ನು 2001 ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಸಮ್ಮೇಳನ ಸರ್ಕಾರ ಜಾರಿಗೆ ತರಲಾಗಿತ್ತು.ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಮ್ಮು ಪ್ರಾಂತ್ಯದ ವಕೀಲ ಅಂಕುರ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನಲ್ಲಿ ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಹಾಕಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಯೋಜನೆಯನ್ನು ಅಸಂವಿಧಾನಿಕವೆಂದು ಘೋಷಿಸಿತ್ತು. ಕಾಯಿದೆಯಡಿ ವರ್ಗಾವಣೆಗೊಂಡ ಸರ್ಕಾರಿ ಜಮೀನುಗಳ ಬಗ್ಗೆ ವಿವರವಾದ ವರದಿಯನ್ನು ಕೋರಿ ಹಾಗೆ ಈ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಇನ್ನು ಡಿಡಿಸಿ ಚುನಾವಣಾ ಪ್ರಚಾರದ ಸಮಯದಲ್ಲಿ, ಬಿಜೆಪಿ ರೋಶ್ನಿ ವಿಷಯವನ್ನು ಮತ ಸೆಳೆಯುವ ಉದ್ದೇಶದಿಂದ ಕೈ ಗೆತ್ತಿಕೊಂಡಿತು.
ಏನಿದು ರೋಶ್ನಿ ಕಾಯ್ದೆ?
2001ರಲ್ಲಿ ಅಧಿಕಾರದಲ್ಲಿದ್ದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ರೋಶ್ನಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಒತ್ತುವರಿಯಾದ ಸಾರ್ವಜನಿಕ ಭೂಮಿಯನ್ನು ಅಲ್ಲಿ ವಾಸಿಸುತ್ತಿರುವ ಜನರಿಂದ ಹಿಂಪಡೆಯಲು ಸಾಧ್ಯವಿಲ್ಲದ ಹಿನ್ನೆಲೆ ಅನಧಿಕೃತವಾಗಿ ರಾಜ್ಯದ ಭೂಮಿಯಲ್ಲಿರುವವರು, ಅದರ ಮಾರುಕಟ್ಟೆ ದರವನ್ನು ನೀಡಿ ಮಾಲೀಕತ್ವವನ್ನು ಪಡೆಯಲು ಅನುಕೂಲವಾಗುವಂತೆ ಈ ಕಾಯ್ದೆ ಜಾರಿಗೊಳಿಸಲಾಗಿತ್ತು.