ನವದೆಹಲಿ: ಉತ್ತರ ಪ್ರದೇಶದಿಂದ ವಲಸೆ ಕಾರ್ಮಿಕರನ್ನು ಮರಳಿ ಕರೆದೊಯ್ಯಲು ಬಯಸುವ ಯಾವುದೇ ರಾಜ್ಯವು ಸರ್ಕಾರದಿಂದ ಅನುಮತಿ ಪಡೆಯಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಾರ್ಮಿಕರ ಸಾಮಾಜಿಕ, ಕಾನೂನು ಹಾಗೂ ಆರ್ಥಿಕ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ರಾಜ್ಯದಲ್ಲಿ ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ಆರೋಪಗಳ ಕುರಿತು ಅಸಮಾಧಾನಗೊಂಡ ಆದಿತ್ಯನಾಥ್, "ವಲಸೆ ಕಾರ್ಮಿಕರು ನಮ್ಮ ಅತಿದೊಡ್ಡ ಸಂಪನ್ಮೂಲವಾಗಿದ್ದು, ರಾಜ್ಯ ಸರ್ಕಾರವು ಅವರಿಗೆ ಉತ್ತರ ಪ್ರದೇಶದಲ್ಲಿ ಉದ್ಯೋಗ ನೀಡಲಿದ್ದು, ಅದಕ್ಕಾಗಿಯೇ ಆಯೋಗ ಸ್ಥಾಪಿಸಲಾಗುವುದು" ಎಂದರು.
ಸರ್ಕಾರದ ಪ್ರಯತ್ನದಿಂದ ಇದುವರೆಗೆ 23 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಮರಳಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಅವರಲ್ಲಿ ಹೆಚ್ಚಿನವರು ಮುಂಬೈ ಮತ್ತು ದೆಹಲಿಯಿಂದ ಹಿಂದಿರುಗಿದ್ದಾರೆ. ಅವರಿಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಆದಿತ್ಯನಾಥ್ ಹೇಳಿದರು.