ಮಯೂರ್ಭಂಜ್ (ಒಡಿಶಾ): ಭೀಕರ ಚಂಡಮಾರುತಕ್ಕೆ ಮನೆ ಕಳೆದುಕೊಂಡಿರುವ ವೃದ್ಧ ದಂಪತಿ ಶೌಚಾಲಯದಲ್ಲೇ ಜೀವನ ನಡೆಸುತ್ತಿದ್ದಾರೆ. ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಗಿರಿ ದೇಹರಿ ಹಾಗೂ ಅವರ ವಿಶೇಷಚೇತನ ಪತ್ನಿ ಜಾತಿ ದೇಹುರಿ ಕಳೆದ ಐದು ವರ್ಷಗಳಿಂದ ಇದರಲ್ಲೇ ವಾಸವಾಗಿದ್ದಾರೆ.
ಐದು ವರ್ಷಗಳ ಹಿಂದೆ ಬೀಸಿದ ಚಂಡಮಾರುತಕ್ಕೆ ಮನೆ ಕಳೆದುಕೊಂಡ ದಂಪತಿಗೆ ಇಲ್ಲಿಯವರೆಗೆ ಯಾವುದೇ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಅವರು ಇದರಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣಗೊಂಡಿದೆ.
ಸರ್ಕಾರದ ಯಾವುದೇ ಸಹಾಯ ಸಿಗದ ಕಾರಣ ದಂಪತಿ ಬೀದಿಗಳಲ್ಲಿ ವಾಸ ಮಾಡುವಂತಹ ಸ್ಥಿತಿ ನಿರ್ಮಾಣಗೊಳ್ಳಬಹುದು ಎಂಬ ಭಯದಲ್ಲಿದ್ದು, ಇವರಿಗೆ ಯಾವುದೇ ಆಸ್ತಿ ಇಲ್ಲ. ಈಗಾಗಲೇ ವಯಸ್ಸಾಗಿರುವ ಕಾರಣ ದುಡಿದು ತಿನ್ನುವ ಶಕ್ತಿ ಕೂಡ ಇಲ್ಲ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗಿರಿ ದೇಹರಿ ಚಂಡಮಾರುತದಿಂದ ಮನೆ ನಾಶವಾಗಿದೆ. ಆದರೆ, ಅದರ ಪಕ್ಕದಲ್ಲಿದ್ದ ಶೌಚಾಲಯ ಹಾಗೇ ಇದೆ. ಹೀಗಾಗಿ ಅದರಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ, ಇದರಲ್ಲಿ ಎಷ್ಟು ದಿನ ಜೀವನ ನಡೆಸುತ್ತೇವೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ವಸತಿ ಅನುದಾನ ನನಗೆ ಸಿಕ್ಕಿತ್ತು. ಆದರೆ ಮನೆ ನಿರ್ಮಾಣ ಮಾಡಲು ನನ್ನ ಬಳಿ ಹಣವಿರಲಿಲ್ಲ ಎಂದಿದ್ದಾರೆ. ಇವರಿಗೆ ಸರ್ಕಾರದಿಂದ ಪಂಚಣಿ ಹಣ ಕೂಡ ಬರುತ್ತಿಲ್ಲ. ಹೆಂಡತಿ ವಿಶೇಷಚೇತನವಾಗಿದ್ದು, ಸರ್ಕಾರಿ ಅಧಿಕಾರಿಗಳು ಯಾವುದೇ ಸಹಾಯ ಮಾಡಿಲ್ಲ ಎಂದು ತಮ್ಮ ಗೋಳು ಹೇಳಿಕೊಂಡಿದ್ದಾರೆ.