ಹೈದರಾಬಾದ್: ಹೈದರಾಬಾದ್ನಲ್ಲಿ ಕಳೆದ 14 ಗಂಟೆಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮನೆ, ಕಟ್ಟಡಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಶೇಕ್ಪೇಟೆ, ಬಹದ್ದೂರ್ಪುರ, ಹಯತ್ ನಗರ, ವನಸ್ಥಲಿಪುರಂ, ಎಲ್.ಬಿ.ನಗರ, ಸೆರಿಲಿಂಗಂಪಲ್ಲಿ, ಖೈರತಾಬಾದ್, ಆಸಿಫ್ನಗರ, ಬಂಡಲಗುಡ, ಚಾರ್ಮಿನಾರ್ ಮತ್ತು ಉಪ್ಪಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ.

ಮಳೆ ಮುಂದುವರೆಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅತೀ ಮಳೆಯಿಂದಾಗಿ ರಸ್ತೆಯ ಮೇಲೆ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಹವಾಮಾನ ಇಲಾಖೆ ಪ್ರಕಾರ, ತೆಲಂಗಾಣದ ಪಕ್ಕದ ರಾಜ್ಯ ಕರ್ನಾಟಕಕ್ಕೂ ಈ ಮಳೆ ಆವರಿಸಲಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ 18.3 ಸೆಂ.ಮೀ., ಕರೀಂ ನಗರದಲ್ಲಿ 17.9 ಸೆಂ.ಮೀ. ಸೇರಿದಂತೆ ರಾಜ್ಯಾದ್ಯಂತ ಮಳೆ ಸುರಿಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ತೆಲಂಗಾಣದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.