ಮಹಾತ್ಮ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದ ಬಹುಭಾಷಾ ನಟ ಕಮಲ್ ಹಾಸನ್ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಯಲಿದೆ.
'ಮಕ್ಕಳ್ ನೀದಿ ಮಯ್ಯಮ್' ಪಕ್ಷದ ಸ್ಥಾಪಕ ಕಮಲ್ ಹಾಸನ್ ಕಳೆದ ಭಾನುವಾರ ಚುನಾವಣಾ ಪ್ರಚಾರದ ವೇಳೆ 'ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ' ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಿಂದೂ ಧರ್ಮದ ವ್ಯಕ್ತಿಯನ್ನು ಭಯೋತ್ಪಾದನೆಯೊಂದಿಗೆ ತಳುಕು ಹಾಕಿದ್ದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಅವರ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು. ಈ ಹೇಳಿಕೆ ಅನೇಕರ ಆಕ್ರೋಶಕ್ಕೆ ಕೂಡಾ ಕಾರಣವಾಗಿತ್ತು.
ಕಮಲ್ ಹೇಳಿಕೆ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಖ್ಯಾತ ನಟರಾದ ನೀವು ಜನರಿಗೆ ಸ್ಫೂರ್ತಿಯಾಗಬೇಕೇ ಹೊರತು ದೇಶ ಒಡೆಯುವ ಕೆಲಸ ಮಾಡಬೇಡಿ ಎಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಸೇರಿ ಸಾಕಷ್ಟು ಮಂದಿ ಕಮಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.