ನಾಗಪುರ (ಮಹಾರಾಷ್ಟ್ರ): 2012ರಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕ್ಯಾಬಿನೆಟ್ ಮಂತ್ರಿ ಯಶೋಮತಿ ಠಾಕೂರ್ ಅವರಿಗೆ ನೀಡಲಾಗಿದ್ದ 3 ತಿಂಗಳ ಜೈಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ನ ನಾಗಪುರ ಪೀಠ ತಡೆ ಹಿಡಿದಿದೆ.
ಅಕ್ಟೋಬರ್ 15ರಂದು ಅಮರಾವತಿಯ ಸೆಷೆನ್ಸ್ ಕೋರ್ಟ್ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಸಚಿವೆಯ ಕಾರಿನ ಚಾಲಕ ಸೇರಿದಂತೆ ಮೂವರಿಗೆ ಪೊಲೀಸ್ ಮೇಲೆ ಹಲ್ಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಒಂದು ವಾರದ ಹಿಂದೆ ಸಚಿವೆ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಶಿಕ್ಷೆಯನ್ನು ರದ್ದು ಮಾಡಬೇಕೆಂದು ಮನವಿ ಮಾಡಿದ್ದರು. ಸಚಿವೆಯ ಪರ ವಕೀಲರಾದ ಸುಬೋಧ್ ಧರ್ಮಾಧಿಕಾರಿ ಹಾಗೂ ಅನಿಕೇತ್ ನಿಗಂ ವಾದ ಮಂಡನೆ ಮಾಡಿದ್ದರು.
ಸಚಿವೆಯ ಪರ ವಕೀಲರ ವಾದವನ್ನು ಒಪ್ಪಿಕೊಂಡ ನ್ಯಾಯಮೂರ್ತಿ ವಿನಯ್ ಜೋಷಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿದೆ. ಇನ್ನಷ್ಟು ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ.
ಘಟನೆಯ ಹಿನ್ನೆಲೆ ಏನು?
2012 ಮಾರ್ಚ್ 24ರಂದು ಶಾಸಕಿಯಾಗಿದ್ದ ಯಶೋಮತಿ ಠಾಕೂರ್ ಅಮರಾವತಿ ಬಳಿಯ ರಾಜಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಚುನಭಟ್ಟಿ ಎಂಬಲ್ಲಿ ಕಾರಿನಲ್ಲಿ ಹೊರಡುವಾಗ ಸಂಚಾರಿ ನಿಯಮ ಉಲ್ಲಂಘಿಸಿದ್ದರು.
ಇದನ್ನು ಸಂಚಾರಿ ಪೊಲೀಸ್ ಆದ ಉಲ್ಲಾಸ್ ರೌರಲೆ ಪ್ರಶ್ನಿಸಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಈ ವೇಳೆ, ಕಾರಿನ ಚಾಲಕ ಸಾಗರ್ ಸುರೇಶ್ ಖಾಂಡೇಕರ್ ಹಾಗೂ ಪಕ್ಷದ ಕಾರ್ಯಕರ್ತರಾದ ಶರದ್ ಕಾಶೀರಾವ್ ಜವಾಂಜಲ್ ಹಾಗೂ ರಾಜು ಕಿಶನ್ ಇಂಗ್ಳೆ ಎಂಬುವವರು ಜೊತೆಗಿದ್ದರು ಎಂದು ಚಾರ್ಚ್ಶೀಟ್ ಉಲ್ಲೇಖಿಸಿದೆ.