ಮುಂಬೈ: ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟಕ್ಕೆ ಜನರು ನಲುಗಿ ಹೋಗಿದ್ದಾರೆ. ಎಲ್ಲೆಲ್ಲೂ ನೀರು ಆವರಿಸಿದ್ದು, ಜನಜೀವನವೂ ನೀರುಪಾಲಾಗಿದೆ. ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆ ಸಂಚಾರ, ಸಂಪರ್ಕವನ್ನು ಅಸ್ತವ್ಯಸ್ತಗೊಳಿಸಿದೆ.
ಭಾರಿ ಮಳೆಯಿಂದ ನಾಸಿಕ್ನಲ್ಲಿರುವ ತ್ರಿಯಂಬಕೇಶ್ವರ ದೇಗುಲದ ಆವರಣದಲ್ಲಿ ನೀರು ನುಗ್ಗಿದೆ. ಸ್ಥಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಕೇಂದ್ರೀಯ ರೈಲ್ವೆಯ ಮುಂಬೈ ಉಪನಗರ ವಿಭಾಗದ ಮಾರ್ಗ ಸಹ ಜಲಾವೃತವಾಗಿದೆ. ಸಿಯಾನ್, ಕುರ್ಲಾ ಸೇರಿದಂತೆ ಹಲವೆಡೆ ರೈಲ್ವೆ ಸಂಚಾರ ರದ್ದು ಮಾಡಲಾಗಿದೆ. ಕಲ್ಯಾಣ ರೈಲ್ವೆ ನಿಲ್ದಾಣದಲ್ಲಿಯೂ ನೀರು ನುಗ್ಗಿದೆ.
ಸಿಯಾನ್, ಸಂತ ಕ್ರಜ್ ಏರಿಯಾ ಸೇರಿ ಬಹುತೇಕ ಕಡೆಗಳಲ್ಲಿನ ರಸ್ತೆಗಳು ನೀರಿನಲ್ಲಿ ಮುಳುಗಿಹೋಗಿವೆ. ಸಂಚಾರ ಸಮಸ್ಯೆ ಹತೋಟಿ ಮೀರಿದೆ. ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಿದೆ.
ನಾಲ ಸೋಪರ ಏರಿಯಾದ ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಮನೆಯೊಳಗೆ ನುಗ್ಗಿರುವ ನೀರನ್ನು ಜನರು ಹೊರಹಾಕುತ್ತಿರುವ ದೃಶ್ಯ ಇಲ್ಲಿ ಸಮಾನ್ಯವಾಗಿ ಕಂಡುಬರುತ್ತಿದೆ.