ಪಥನಮ್ತಿಟ್ಟ: ಜಿಲ್ಲಾಧಿಕಾರಿ ಮತ್ತು ಶಾಸಕ ಸೇರಿ ಕಿಲೋಮೀಟರಗಟ್ಟಲೆ ಬೆಟ್ಟ ಹತ್ತಿಳಿದು ಬುಡಕಟ್ಟು ಜನರಿಗೆ ಅಕ್ಕಿ ಹಾಗೂ ಇತರ ಅಗತ್ಯ ವಸ್ತುಗಳನ್ನು ತಲುಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪಥನಮ್ತಿಟ್ಟ ಡಿಸಿ ಪಿ.ಬಿ. ನೂಹ್ ಮತ್ತು ಶಾಸಕ ಕೆ.ಯು. ಜನೀಶಕುಮಾರ, 3 ಕಿಮೀ ಟ್ರೆಕ್ಕಿಂಗ್ ಮಾಡಿ ಕಾಡಿನಲ್ಲಿರುವ ಬುಡಕಟ್ಟು ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ.
ಪಥನಮ್ತಿಟ್ಟ ಜಿಲ್ಲೆಯ ಅವನಿಪ್ಪರಾ ಬುಡಕಟ್ಟು ವಾಸಸ್ಥಾನ ಪೆರಿಯಾರ್ ಅಭಯಾರಣ್ಯದಲ್ಲಿ ಮೀನಾಚಿಲ್ ನದಿ ದಂಡೆಯಲ್ಲಿದೆ. ಲಾಕ್ಡೌನ್ನಿಂದಾಗಿ ಇಲ್ಲಿ ವಾಸಿಸುವ 37 ಬುಡಕಟ್ಟು ಕುಟುಂಬಗಳು ದಿನನಿತ್ಯದ ಅಗತ್ಯ ವಸ್ತು ಸಿಗದೇ ಪರದಾಡುತ್ತಿದ್ದರು.
ಸ್ಥಳೀಯ ವಾರ್ಡ್ ಸದಸ್ಯರೊಬ್ಬರು ಮಾಹಿತಿ ನೀಡಿದ ಮೇಲಷ್ಟೆ ಇವರ ಕಷ್ಟ ಹೊರಗಿನ ಜಗತ್ತಿಗೆ ತಿಳಿದಿದೆ. ವಿಷಯ ತಿಳಿದ ಇಲ್ಲಿನ ಡಿಸಿ ಪಿ.ಬಿ. ನೂಹ್, ಸ್ಥಳೀಯ ಶಾಸಕ ಹಾಗೂ ಇನ್ನು ಕೆಲ ಜನರನ್ನು ಜೊತೆಯಾಗಿಸಿಕೊಂಡು ಕಡಿದಾದ ಬೆಟ್ಟ ಗುಡ್ಡದ ಮಾರ್ಗದಲ್ಲಿ ಸಾಗಿ ಬುಡಕಟ್ಟು ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಈ ಬುಡಕಟ್ಟು ಜನ ವಾಸಿಸುವ ಸ್ಥಳಕ್ಕೆ ತೆರಳುವ ಮೂರು ಕಿಮೀ ಮಾರ್ಗ ಮಧ್ಯೆ ಜಿಲ್ಲಾಧಿಕಾರಿಗಳ ತಂಡ ನಡೆದುಕೊಂಡೇ ನದಿಯೊಂದನ್ನು ಸಹ ದಾಟಿದೆ. ಡಿಸಿ ನೂಹ್ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.