ತಿರುವನಂತಪುರಂ: ಅನುಮತಿ ಪಡೆಯದೇ ಅನಧಿಕೃತವಾಗಿ ಕೊಚ್ಚಿಯ ಮರಾದು ಎಂಬಲ್ಲಿ ನಿರ್ಮಿಸಿದ್ದ H2o ಹೋಲಿ ಫೇತ್ ಹೆಸರಿನ ಅಪಾರ್ಟ್ಮೆಂಟ್ನ್ನು ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಕರಾವಳಿ ನಿಯಂತ್ರಣ ವಲಯದ ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದಕ್ಕಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಕಟ್ಟಡ ಕೆಡವಲು ಆದೇಶಿಸಿತ್ತು. ಹೀಗಾಗಿ 19 ಮಹಡಿಗಳ ಕಟ್ಟಡವನ್ನು ಸುಮಾರು 800 ಕೆಜಿ ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸ್ಫೋಟಿಸಿ ಕಟ್ಟಡ ಕೆಡವಲಾಗಿದ್ದು, ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಕೇರಳದ ಕೊಚ್ಚಿ ಬಳಿಯ ಮರದು ಹತ್ತಿರ ನಾಲ್ಕು ಅಪಾರ್ಟ್ಮೆಂಟ್ಗಳನ್ನು ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕಳೆದ ವರ್ಷ ಮೇ ತಿಂಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ 350 ಮನೆಗಳನ್ನು ನೆಲಸಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಸ್ಫೋಟಕಗಳ ಸುರಕ್ಷತೆಯನ್ನು ಕಾಪಾಡುವ ಭಾರತದ ಪ್ರಧಾನ ಸಂಸ್ಥೆಯಾದ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪೆಸೊ) ಕಟ್ಟಡಗಳನ್ನು ನೆಲಸಮಗೊಳಿಸಿದೆ.
ಕೊಚ್ಚಿಯಲ್ಲಿ ನಿಯಮ ಉಲ್ಲಂಘನೆ : 4 ಅಪಾರ್ಟ್ಮೆಂಟ್ಗಳ ನೆಲಸಮಕ್ಕೆ ಸುಪ್ರೀಂ ಆದೇಶ
ಅಪಾರ್ಟ್ಮೆಂಟ್ ಸಂಕೀರ್ಣಗಳಾದ ಆಲ್ಫಾ ಸೆರೆನ್, ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಯಲೋರಂ ಅನ್ನು ನೆಲಸಮಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ನಿಯಂತ್ರಿತ ಸ್ಫೋಟದ ಮೂಲಕ ಈ ಫ್ಲ್ಯಾಟ್ಗಳನ್ನು ನೆಲಸಮ ಮಾಡಲಾಗಿದೆ.
ಭಾರತದ ಪರಿಸರ ಸಂರಕ್ಷಣಾ ಕಾಯ್ದೆ ಎಂದರೇನು?
1986 ರ ಅಡಿಯಲ್ಲಿ, ಕರಾವಳಿ ಪ್ರದೇಶದಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲು ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಒಇಎಫ್) ಫೆಬ್ರವರಿ 1991 ರಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಿದೆ. ಇದರ ಪ್ರಕಾರ, ಹೈಟೈಡ್ ಲೈನ್ (ಎಚ್ಟಿಎಲ್) ನಿಂದ 500 ಮೀಟರ್ ವರೆಗಿನ ಕರಾವಳಿ ಭೂಮಿಯನ್ನು ಮತ್ತು ಉಬ್ಬರವಿಳಿತದ ಏರಿಳಿತಗಳಿಗೆ ಒಳಪಡುವ ಕೊಲ್ಲಿಗಳು, ನದಿ ಮುಖಗಳು, ಹಿನ್ನೀರು ಮತ್ತು ನದಿಗಳ ತೀರದಲ್ಲಿ 100 ಮೀಟರ್ ಹಂತವನ್ನು ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಎಂದು ಕರೆಯಲಾಗುತ್ತದೆ. ಕೈಗಾರಿಕೆಗಳು ಅಥವಾ ಸಂಸ್ಕರಣಾ ಪ್ಲೈಟ್ಗಳು ಇತ್ಯಾದಿಗಳ ಸ್ಥಾಪನೆ ಮತ್ತು ವಿಸ್ತರಣೆಗೆ ಅಧಿಸೂಚನೆಯು ನಿರ್ಬಂಧವನ್ನು ವಿಧಿಸಿತ್ತು.
ವಿದೇಶಿ ಹಕ್ಕಿಗಳು ವಲಸೆ ಬರುವ ಪ್ರದೇಶ :
ವಿಶೇಷ ಎಂದರೆ ಈ ಭಾಗ ವಿದೇಶಿ ಹಕ್ಕಿಗಳು ವಲಸೆ ಬರುವ ಪ್ರದೇಶವಾಗಿದೆ. ಪ್ರಶಾಂತ ಸರೋವರಕ್ಕೂ ಮರದ್ ಪ್ರದೇಶ ಹೆಸರುವಾಸಿಯಾಗಿದೆ ಮತ್ತು ಚಳಿಗಾಲದ ಅವಧಿಯಲ್ಲಿ ಇಲ್ಲಿಗೆ ಯುರೋಪ್ ರಾಷ್ಟ್ರಗಳಿಂದ ಪ್ರಮುಖ ಪಕ್ಷಿಗಳ ವಲಸೆ ಬಂದು ಗೂಡು ಕಟ್ಟಿ ಜೀವನ ರೂಪಿಸಿಕೊಳ್ಳುತ್ತವೆ. ಹೀಗಾಗಿ ಈ ಪ್ರದೇಶದಿಂದ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳನ್ನ ತೆರವುಗೊಳಿಸಲು ಆದೇಶಿಸಿತ್ತು.