ಉತ್ತರ ಪ್ರದೇಶ: ಕೊರೊನಾ ವೈರಸ್ನಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮಠ, ಮಂದಿರಗಳಿಗೆ ಬೀಗ ಹಾಕಲಾಗಿದೆ. ಮನೆಯಿಂದ ಹೊರಬರದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿದ್ದರೂ ಲಾಕ್ಡೌನ್ ಆದೇಶ ಉಲ್ಲಂಘಿಸಿ ಗುಂಪು ಗುಂಪಾಗಿ ತೆರಳಿ ಜನರು ಮಸೀದಿಗಳಲ್ಲಿ ನಮಾಜ್ ಮಾಡುತ್ತಿರುವುದು ಕಂಡು ಬಂದಿದೆ.
ಹೀಗಾಗಿ ಮುಸಲ್ಮಾನ ಮುಖಂಡರು ಮಸೀದಿಗೆ ತೆರಳದಂತೆ, ಮನೆಯಲ್ಲೇ ಕುಳಿತು ನಮಾಜ್ ಮಾಡುವಂತೆ ಧರ್ಮೀಯರಿಗೆ ಮನವಿ ಮಾಡಿದ್ದಾರೆ. ಆದರೂ ಯಾವುದನ್ನೂ ಲೆಕ್ಕಿಸದೆ ನಮಾಜ್ಗೆ ಹೆಚ್ಚು ಸಂಖ್ಯೆಯಲ್ಲಿ ಮಸೀದಿಗೆ ತೆರಳುತ್ತಿರುವ ಕಾರಣ ಉತ್ತರಪ್ರದೇಶದ ದಾರುಲ್ ಉಲೇಮಾ ದೇವಬಂದ್ನಲ್ಲಿ ಏಕಕಾಲದಲ್ಲಿ ಕೇವಲ 5 ಜನರು ನಮಾಜ್ ಮಾಡಬೇಕು ಎಂದು ಫತ್ವಾ ಹೊರಡಿಸಲಾಗಿದೆ. ಜೊತೆಗೆ ಪ್ರಾರ್ಥನಾ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಕೊರೊನಾ ವೈರಸ್ ಸೋಂಕಿನ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ಫತ್ವಾ ನೀಡಲಾಗಿದೆ. ಜೊತೆಗೆ ಕೋವಿಡ್-19 ಎಂಬ ಮಹಾಮಾರಿ ವಿರುದ್ಧ ಹೋರಾಡಲು ಇದೀಗ ನಾವೆಲ್ಲರೂ ಒಗ್ಗೂಡಬೇಕಾಗಿದೆ. ಈ ಕಾರಣಕ್ಕಾಗಿ ಈ ಫತ್ವಾ ಹೊರಡಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.