ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಜರುಗಿದ ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡಿರುವ 18 ಮಂದಿಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆ ಆಸ್ಪತ್ರೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಭೇಟಿಯ ನಂತರ ಮಾತನಾಡಿದ ಪ್ರಿಯಾಂಕ ಗಾಂಧಿ ವಾದ್ರಾ " ಗೂಂಡಾಗಳು ಕಾಂಪಸ್ನೊಳಗೆ ಏಕಾಏಕಿ ನುಗ್ಗಿ ಕೋಲು ಮತ್ತು ಇತರ ಆಯುಧಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲವರ ಕೈಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ಒಬ್ಬ ಪೊಲೀಸ್ ಅಂತೂ ವಿದ್ಯಾರ್ಥಿಯ ತಲೆಗೆ ಒದ್ದಿದ್ದಾನೆ ಎಂದು ಸ್ವತಃ ವಿದ್ಯಾರ್ಥಿಯೇ ತಿಳಿಸಿದ್ದಾನೆ' ಎಂದರು.
ಪ್ರಿಯಾಂಕ ಗಾಂಧಿ ವಾದ್ರಾ ಟ್ವೀಟ್ ಮಾಡಿ "ತಮ್ಮ ಮಕ್ಕಳ ಮೇಲೆಯೇ ಇಂತಹ ಹಿಂಸಾಚಾರವನ್ನು ಎಸಗಲು ಅನುಮತಿಸುವ ಮತ್ತು ಪ್ರೋತ್ಸಾಹಿಸುವ ಸರ್ಕಾರದ ಬಗ್ಗೆ ನನಗೆ ತೀವ್ರ ಆತಂಕವಾಗುತ್ತಿದೆ" ಎಂದಿದ್ದಾರೆ.