ಛತ್ತೀಸ್ಗಡ : ಪೊಲೀಸ್ ಶಿಬಿರ ಸ್ಥಾಪಿಸುವುದರ ವಿರುದ್ದ ಇಡೀ ಗ್ರಾಮಸ್ಥರು ದಂಗೆಯೆದ್ದ ಘಟನೆ ದಂತೇವಾಡ ಜಿಲ್ಲೆಯ ಪೊತಾಲಿ ಗ್ರಾಮದಲ್ಲಿ ನಡೆದಿದೆ.
ರಾಜ್ಯ ರಾಜಧಾನಿ ರಾಯ್ಪುರದಿಂದ 350 ಕಿಲೋಮೀಟರ್ ದೂರದಲ್ಲಿರುವ ದಂತೇವಾಡದ, ಮಾವೋವಾದಿ ನಕ್ಸಲ್ ಪ್ರಾಬಲ್ಯವಿರುವ ಪೊತಾಲಿ ಗ್ರಾಮದಲ್ಲಿ ಶಿಬಿರ ಸ್ಥಾಪಿಸಲು ಪೊಲೀಸ್ ಇಲಾಖೆ ನಿರ್ಧರಿಸಿತ್ತು. ಆದರೆ ಇದನ್ನು ವಿರೋಧಿಸಿದ ಬುಡಕಟ್ಟು ಸಮುದಾಯದ ನೂರಾರು ಜನರು ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪೊತಾಲಿ ಗ್ರಾಮವು ಅರನ್ಪುರ್ ಪೊಲೀಸ್ ಠಾಣೆಯಿಂದ 10 ಕಿ.ಮೀ ದೂರದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿದ್ದು, ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ದೂರದರ್ಶನದ ಕ್ಯಾಮರಾ ಮ್ಯಾನ್ ಹಾಗೂ ಮೂವರು ಭದ್ರತಾ ಸಿಬ್ಬಂದಿಗಳನ್ನು ನಕ್ಸಲರು ಹತ್ಯೆ ಮಾಡಿದ ಪ್ರದೇಶದ ಸಮೀಪದಲ್ಲಿದೆ. ಘಟನೆಯ ನಂತರ ಛತ್ತೀಸ್ಗಡದ ಶಶಸ್ತ್ರ ಪಡೆ (ಸಿಎಎಫ್) ಹಾಗೂ ಜಿಲ್ಲಾ ಮೀಸಲು ಪಡೆ(ಡಿಆರ್ಜಿ)ಯನ್ನು ಶಿಬಿರದ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.
ಘಟನೆ ಹಿಂದೆ ನಕ್ಸಲ್ ಕುಮ್ಮಕ್ಕು:
ಪೊಲೀಸ್ ಶಿಬಿರದ ವಿರುದ್ದ ಗ್ರಾಮಸ್ಥರ ಪ್ರತಿಭಟನೆಯ ಹಿಂದೆ ನಕ್ಸಲ್ ಕುಮ್ಮಕ್ಕಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ನಕ್ಸಲ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಪೊಲೀಸ್ ಶಿಬಿರ ಸ್ಥಾಪನೆಯಾಗದಂತೆ ಗ್ರಾಮಸ್ಥರ ಮೂಲಕ ಒತ್ತಡ ಹೇರಲಾಗುತ್ತಿದೆ. ಈ ಭಾಗದಲ್ಲಿ ಭದ್ರತೆ ಒದಗಿಸಲು ಹಾಗೂ ನಕ್ಸಲ್ ನಿಗ್ರಹಕ್ಕೆ ಪೊಲೀಸ್ ಶಿಬಿರ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.