ಭೋಪಾಲ್( ಮಧ್ಯಪ್ರದೇಶ) : ಬಿಜೆಪಿ ತನ್ನ ತಂತ್ರಗಾರಿಕೆ ಮೂಲಕ ರಾಮ್ ವಿಲಾಸ್ ಪಾಸ್ವಾನ್ ಅವರ ಪರಂಪರೆಯನ್ನೇ ನಾಶಗೊಳಿಸಿ, ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರ ವರ್ಚಸ್ಸು ತಗ್ಗುವಂತೆ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಮತ್ತು ಮಧ್ಯಪ್ರದೇಶ ಉಪಚುನಾವಣೆ ಬಳಿಕ ಸರಣಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವೇಳೆ, 75 ಕ್ಷೇತ್ರಗಳಲ್ಲಿ ವಿಜಯದ ನಗೆ ಬೀರಿರುವ ಆರ್ಜೆಡಿ( ರಾಷ್ಟ್ರೀಯ ಜನತಾ ದಳ) ಪಕ್ಷದ ನಾಯಕ ತೇಜಸ್ವಿ ಯಾದವ್ಗೆ ಅಭಿನಂದಿಸಿದ್ದಾರೆ.
ಇದೇ ವೇಳೆ, ನಿತೀಶ್ ಜೀ ನಿಮಗೆ ಬಿಹಾರ ರಾಜ್ಯ ತುಂಬಾ ಚಿಕ್ಕದು, ನೀವು ರಾಷ್ಟ್ರ ರಾಜಕಾರಣಕ್ಕೆ ಬರಬೇಕು. ಕೇಂದ್ರದ ಒಡೆದು ಆಳುವ ನೀತಿಯನ್ನು ಮುಂದುವರಿಸಲು ಬಿಡಬಾರದು. ಎಲ್ಲ ಸಮಾಜವಾದಿಗಳು ಜಾತ್ಯತೀತ ಸಿದ್ದಾಂತದಲ್ಲಿ ನಂಬಿಕೆ ಇಡುವಂತೆ ಮಾಡಲು ನೀವು ಈ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಿ ಎಂದು ಸಿಂಗ್ ಹೇಳಿದ್ದಾರೆ.
ಇನ್ನು ಸಿದ್ಧಾಂತಗಳಿಗಾಗಿ ಹೋರಾಟ ಮಾಡುತ್ತಿರುವ ದೇಶದ ಒಬ್ಬನೇ ನಾಯಕ ರಾಹುಲ್ ಗಾಂಧಿ. ರಾಜಕೀಯವು ಸಿದ್ದಾಂತಕ್ಕೆ ಸಂಬಂಧಿಸಿದ್ದು, ಎಂಬುದನ್ನು ಎನ್ಡಿಎ ಮಿತ್ರ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲಿ ಮಹಾತ್ವಾಕಾಂಕ್ಷೆಯಿಂದಾಗಿ ಸಿದ್ದಾಂತ ತ್ಯಜಿಸಿ ಸ್ವಾರ್ಥಕ್ಕಾಗಿ ರಾಜಿ ಮಾಡಿಕೊಂಡರೆ ಅಂತಹವರು ರಾಜಕೀಯದಲ್ಲಿ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.