ಬಿಜ್ನೋರ್(ಉತ್ತರ ಪ್ರದೇಶ): ಮಹೀಂದ್ರಾ ಪಿಕಪ್ ವಾಹನವೊಂದು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದ ಪರಿಣಾಮ ವಾಹನದ ಚಾಲಕ ಅದರಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮಂದಾವಳಿ ಪ್ರದೇಶದ ಮೋಟಾ ಮಹಾದೇವ್ ಭಗುವಾಲಾ ಬೈಪಾಸ್ ರಸ್ತೆಯ ಜಟ್ಪುರಾ ಬೋಂಡಾ ಬಳಿಯ ಲಖ್ದಾನ್ ನದಿಯ ಬಳಿ ಹರಿದ್ವಾರದಿಂದ ಬರುತ್ತಿದ್ದ ಮಹೀಂದ್ರಾ ಪಿಕಪ್ ವಾಹನ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದೆ.
ನದಿಯಲ್ಲಿ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಪೊಲೀಸರು ಪಿಕಪ್ ಚಾಲಕ ಹೋಗುವುದನ್ನು ನಿರಾಕರಿಸಿದ್ದಾರೆ. ಆದರೆ ಮಾತು ಕೇಳದ ಆತ ಕಾರನ್ನು ನೀರಿನತ್ತ ನುಗ್ಗಿಸಿದ್ದಾನೆ. ನೀರಿನ ರಭಸಕ್ಕೆ ಪಿಕಪ್ ಸಿಲುಕಿ ಕೊಚ್ಚಿಕೊಂಡು ಹೋಗಿದೆ. ಬಳಿಕ ವಾಹನ ಮುಳುಗುತ್ತಿದ್ದಂತೆ ಪೊಲೀಸರು ಸ್ಥಳೀಯರ ಸಹಾಯದಿಂದ ವಾಹನವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಆದರೆ ಚಾಲಕ ಮಾತ್ರ ಪಿಕಪ್ನೊಳಗೆ ಅಸುನೀಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಭಸವಾಗಿ ಹರಿಯುತ್ತಿದ್ದ ನೀರಿನ ಮಧ್ಯೆಯೇ ಪ್ರಾಣ ಪಣಕ್ಕಿಟ್ಟು ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ವಾಹನವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನ ಒಳಗಿರುವ ಚಾಲಕನನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಗಾಗಲೇ ಚಾಲಕ ಪ್ರಾಣ ಕಳೆದುಕೊಂಡಿದ್ದ ಅಂತಾರೆ ಮ್ಯಾಂಡವಾಲಿ ಪೊಲೀಸ್ ಠಾಣೆಯ ಸಂದೀಪ್ ತ್ಯಾಗಿ.