ನವದೆಹಲಿ: ಅಯೋಧ್ಯೆಯಂತಹ ಐತಿಹಾಸಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿ ನಿವೃತ್ತರಾದ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಸ್ಥಾನಕ್ಕೆ ಶರದ್ ಅರವಿಂದ್ ಬೊಬಡೆ ಬರಲಿದ್ದಾರೆ.
ಸುಪ್ರೀಂಕೋರ್ಟ್ನ 47ನೇ ಮುಖ್ಯನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೊಬಡೆ (63) ಅವರು, ಇಂದು (ಸೋಮವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ 17 ತಿಂಗಳು ಸಿಜೆಐ ಆಗಿ ಮುಂದುವರಿಯಲಿದ್ದು, 2021ರ ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ್ನಲ್ಲಿ 1956 ಏಪ್ರಿಲ್ 24ರಂದು ಅರವಿಂದ ಬೊಬಡೆ ಅವರ ಮಗನಾಗಿ ಜನಿಸಿದ್ದರು. ನಾಗ್ಪುರ್ ವಿಶ್ವವಿದ್ಯಾನಿಲಯದಿಂದ ಬಿಎ ಹಾಗೂ ಎಲ್ಎಲ್ಬಿ ಪದವಿ ಪಡೆದು 1978ರಲ್ಲಿ ಬಾರ್ ಕೌನ್ಸಿಲರ್ ಆದರು.
ನ್ಯಾಯಮೂರ್ತಿ ಬೊಬಡೆ ಅವರು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಸುಪ್ರೀಂಕೋರ್ಟ್ಗೆ ಬರುವ ಮುನ್ನ 21 ವರ್ಷಗಳ ಸೇವೆ ಸಲ್ಲಿಸಿದ್ದು, 1998ರಲ್ಲಿ ಹಿರಿಯ ವಕೀಲರಾಗಿ ಸುಪ್ರೀಂಗೆ ನೇಮಕವಾದರು. ಜಸ್ಟೀಸ್ ಬಾಬಡೆ ಅವರನ್ನು ಮಾರ್ಚ್ 29, 2000ರಂದು ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ಬಾಂಬೆ ಹೈಕೋರ್ಟ್ಗೆ ನೇಮಿಸಲಾಯಿತು.
ಬಳಿಕ 2012ರ ಅಕ್ಟೋಬರ್ 16 ರಂದು ಮಧ್ಯಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎರಡು ನ್ಯಾಯ ಪೀಠದ ನೇತೃತ್ವ ವಹಿಸಿದ್ದ ಅವರು, ಚುನಾಯಿತ ಸದಸ್ಯರಿಗೆ ಬಿಸಿಸಿಐನ ವ್ಯವಹಾರ ನೋಡಿಕೊಳ್ಳಲು ಅನುವು ಮಾಡಿಕೊಡುವ ಕಚೇರಿ ರದ್ದುಗೊಳಿಸುವಂತೆ ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ನಿರ್ದೇಶನ ನೀಡಿದ್ದರು.