ಇಂದೋರ್: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಪಾಕಿಸ್ತಾನದ ಮೇಲೆ ಇನ್ನಿಲ್ಲದ ಪ್ರೀತಿ. ಹೀಗಾಗಿ ಪಾಕಿಸ್ತಾನಿಗಳಿಗೇ ಪದ್ಮಶ್ರೀ ನೀಡಿ ಎಂದು ನಟಿ ಸ್ವರ ಭಾಸ್ಕರ್ ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಸಂಗೀತ ಕಾರ್ಯಕ್ರಮಕ್ಕೆಂದು ಭಾರತಕ್ಕೆ ಅಗಮಿಸಿ 2016ರಲ್ಲಿ ಭಾರತೀಯ ಪೌರತ್ವ ಪಡೆದುಕೊಂಡಿರುವ ಅದ್ನಾನ್ ಸಾಮಿ ಅವರಿಗೆ ಕೇಂದ್ರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ಕ್ರಮ ಖಂಡಿಸಿರುವ ಬಾಲಿವುಡ್ ನಟಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಪಾಕ್ ಮೇಲೆ ಹೆಚ್ಚಿನ ಪ್ರೀತಿ ಇರುವ ಕಾರಣ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಇನ್ಮುಂದೆ ಪಾಕಿಸ್ತಾನದಲ್ಲಿ ನೆಲೆಸಿರುವ ವ್ಯಕ್ತಿಗಳಿಗೂ ಈ ಪ್ರಶಸ್ತಿ ನೀಡಿ ಎಂದು ನಟಿ ಸ್ವರ ಭಾಸ್ಕರ್ ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್ನಲ್ಲಿ ಸಂವಿಧಾನವನ್ನು ಉಳಿಸಿ, ದೇಶವನ್ನು ರಕ್ಷಿಸಿ ರ್ಯಾಲಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದಾರೆ.
ಇದೇ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ದಿಗ್ವಿಜಯ್ ಸಿಂಗ್, ಪಾಕಿಸ್ತಾನದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅದ್ನಾನ್ ಸಾಮಿ ಅವರ ತಂದೆ ಭಾರತದ ಮೇಲೆ ಬಾಂಬ್ ಎಸೆದಿದ್ದರು. ಆದರೆ, ಇದೀಗ ಬಾಂಬ್ ಎಸೆದವನ ಮಗನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ ಎಂದು ಟೀಕಿಸಿದ್ದಾರೆ.