ಚಂಡೀಗಡ್ : ತಾಂಡಾದಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದುನ್ನು ಆಮ್ ಆದ್ಮಿ ಪಕ್ಷದ ಮಹಿಳಾ ಶಾಸಕರು ಖಂಡಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಆಮ್ ಆದ್ಮಿ ಪಕ್ಷ ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ಕಟ್ಟುನಿಟ್ಟಿನ ಕಾನೂನು ವ್ಯವಸ್ಥೆ ತರುವಲ್ಲಿ ಸಂಪೂರ್ಣ ವಿಫಲರಾಗಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಅಪರಾಧದ ಹೊಣೆಗಾರರಾಗಿದ್ದಾರೆ. ಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದರ ಜೊತೆಗೆ ರಾಜ್ಯ ಗೃಹ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಪ್ರತಿಪಕ್ಷದ ಉಪನಾಯಕರಾದ ಸರ್ವ್ಜೀತ್ ಕೌರ್ ಮನುಕೆ, ಬಲ್ಜಿಂದರ್ ಕೌರ್, ಮತ್ತು ರೂಪಿಂದರ್ ಕೌರ್ ರೂಬಿ ಅವರಂತಹ ದೊಡ್ಡ ನಾಯಕರು ಭ್ರಷ್ಟಾಚಾರ ಮತ್ತು ಪೊಲೀಸ್ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡುದ್ದು, ಪೊಲೀಸ್ ವ್ಯವಸ್ಥೆಯೇ ನಾಶವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಭದ್ರತೆ ಮತ್ತು ಭಯದ ವಾತಾವರಣ ನಿರ್ಮಾಣವಾಗಿದ್ದು, ಅಪರಾಧಿಗಳು ಎಗ್ಗಿಲ್ಲದೆ ತಮ್ಮ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದನ್ನು ಕಂಡರೂ ಕಾಣದಂತೆ ಮುಖ್ಯಮಂತ್ರಿಗಳು ತಮ್ಮ ಫಾರ್ಮ್ ಹೌಸ್ ನಲ್ಲಿ ಆನಂದಿಸುತ್ತಿದ್ದು, ಅತ್ಯಾಚಾರಕ್ಕೊಳಗಾದ ಕುಟುಂಬದ ಕೂಗು ಅವರಿಗೆ ಕೇಳುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರದ ದಾಖಲೆಗಳ ಪ್ರಕಾರ, 2018-19ರಲ್ಲಿ 5,058 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ ಕೇವಲ 30 ಪ್ರತಿಶತದಷ್ಟು ಮಂದಿ ಮಾತ್ರ ಶಿಕ್ಷೆಗೊಳಗಾಗಿದ್ದರೆ, ಉಳಿದ 70 ಪ್ರತಿಶತದಷ್ಟು ಜನರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ಮನುಕೆ ಹೇಳಿದ್ದಾರೆ.
ಕಳೆದ ವಾರ ಪಂಜಾಬ್ ನ ಹೋಶಿಯಾರ್ಪುರದ ತಾಂಡಾದ ಹಳ್ಳಿಯೊಂದರಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.