ಅಯೋಧ್ಯೆ: ರಾಮಮಂದಿರ ನಿರ್ಮಾಣ ಮಾಡಲು ಅಯೋಧ್ಯೆಯಲ್ಲಿನ 67 ಎಕರೆ ಭೂಮಿಯನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್ಗೆ ನೀಡಲಾಗಿದೆ. ಅಯೋಧ್ಯೆ ಕಾಯ್ದೆಯಡಿ ಈ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಟ್ರಸ್ಟ್ಗೆ ನೀಡಿದೆ. ಸುಪ್ರೀಂಕೋರ್ಟ್ನಲ್ಲಿ ವಿವಾದ ಬಗೆಹರಿದ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ.
ಆರು ತಿಂಗಳ ಹಿಂದೆ ಕಾಶಿಯ ಜಂಗಂವಾಡಿ ಮಠದಲ್ಲಿರುವ ಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿದ್ದರು. ಇದೀಗ ಈ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ರಾಮ ಮಂದಿರ ನಿರ್ಮಿಸಲು ಆಗಸ್ಟ್ 5 ರಂದು ಭೂಮಿ ಪೂಜೆ ನಡೆಯಲಿದೆ. ಟ್ರಸ್ಟ್ ಆಯೋಜಿಸಿರುವ ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮಹಾಮಾರಿ ಕೋವಿಡ್-19 ನಿಯಮಗಳನ್ನು ಪಾಲಿಸುತ್ತಾ ಸುಮಾರು 200 ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಳೆದ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಅಯೋಧ್ಯೆಯ ವಿವಾದವನ್ನು ಬಗೆಹರಿಸಿ ರಾಮ ಮಂದಿರ ನಿರ್ಮಿಸಲು ಟ್ರಸ್ಟ್ಗೆ ಆದೇಶ ನೀಡಿತ್ತು. ಜೊತೆಗೆ ಪರ್ಯಾಯವಾಗಿ ಉತ್ತರಪ್ರದೇಶದ ಪವಿತ್ರ ಸ್ಥಳದಲ್ಲೇ ಮಸೀದಿ ಕಟ್ಟಿಕೊಳ್ಳಲು 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡಿತ್ತು.