ಬೆಂಗಳೂರು: ಲೌಡ್ಸ್ಪೀಕರ್ನಲ್ಲಿ ಅಜಾನ್ ಕೂಗುವುದು (ಮುಸಲ್ಮಾನರ ಪ್ರಾರ್ಥನಾ ಕರೆ) ಇತರ ಧರ್ಮದವರ ಮೂಲಭೂತ ಹಕ್ಕಿಗೆ ಚ್ಯುತಿ ತರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹೀಗಾಗಿ ಮಸೀದಿಗಳಲ್ಲಿ ಲೌಡ್ಸ್ಪೀಕರ್ ಹಾಕಿ ಅಜಾನ್ ಕೂಗುವುದನ್ನು ನಿಷೇಧಿಸಲು ಕೋರ್ಟ್ ನಿರಾಕರಿಸಿತು.
ಆದಾಗ್ಯೂ ಈ ಲೌಡ್ಸ್ಪೀಕರ್ಗಳು ಶಬ್ದ ಮಾಲಿನ್ಯದ ಕಾಯ್ದೆಯನ್ನು ಪಾಲಿಸುವಂತೆ ನೋಡಿಕೊಳ್ಳುವಂತೆ ಮತ್ತು ಈ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಆದೇಶಿಸಿತು. ಈ ಕುರಿತಾಗಿ ಬೆಂಗಳೂರು ನಿವಾಸಿ ಮಂಜುನಾಥ ಎಸ್. ಹಳವರ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಾಧೀಶ ಅಲೋಕ್ ಅರಾಧೆ ಅವರ ಪೀಠ ವಿಚಾರಣೆ ನಡೆಸಿತು.
ಅಜಾನ್ ಅಥವಾ ಅದಾನ್ ಕೂಗುವುದು ಮುಸಲ್ಮಾನರ ಧಾರ್ಮಿಕ ಮೂಲಭೂತ ಅಗತ್ಯಗಳಲ್ಲೊಂದಾಗಿದೆ. ಆದರೆ ಅಜಾನ್ ಅಥವಾ ಅಜಾನ್ ನಲ್ಲಿರುವ ವಿಷಯಗಳು ಇತರ ಧರ್ಮಗಳ ಜನರ ಭಾವನೆಗಳಿಗೆ ಘಾಸಿ ಮಾಡುತ್ತವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಭಾರತದ ಸಂವಿಧಾನದ 25 ಮತ್ತು 26 ನೇ ವಿಧಿಯು ಭಾರತೀಯ ನಾಗರಿಕತೆಯ ಲಕ್ಷಣವಾದ ಸಹಿಷ್ಣುತೆಯ ತತ್ವವನ್ನು ಒಳಗೊಂಡಿದೆ. ಸಂವಿಧಾನದ 25 (1) ನೇ ವಿಧಿಯು ವ್ಯಕ್ತಿಗಳಿಗೆ ತಮ್ಮ ಸ್ವಂತ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕುಗಳನ್ನು ನೀಡುತ್ತದೆ ಎಂದು ನ್ಯಾಯಾಲಯ ಹೇಳಿತು.
ಆದಾಗ್ಯೂ, ಮೇಲಿನ ಹಕ್ಕು ಸಂಪೂರ್ಣ ಹಕ್ಕಲ್ಲ. ಇದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯದ ಆಧಾರದ ಮೇಲೆ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಮತ್ತು ಭಾರತದ ಸಂವಿಧಾನದ ಭಾಗ III ರ ಇತರ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಜೊತೆಗೆ ಶಬ್ದ ಮಾಲಿನ್ಯ ಮತ್ತು ಧ್ವನಿವರ್ಧಕಗಳ ಬಳಕೆಯ ಮೇಲಿನ ನಿರ್ಬಂಧದ ನಿಯಮಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ನ್ಯಾಯಾಲಯ, ಲೌಡ್ ಸ್ಪೀಕರ್ಗಳು ಮತ್ತು ಸಾರ್ವಜನಿಕ ಮುನ್ಸೂಚನೆ ವ್ಯವಸ್ಥೆಗಳು ಮತ್ತು ಧ್ವನಿ ಉತ್ಪಾದಿಸುವ ಉಪಕರಣಗಳು ಮತ್ತು ಇತರ ಸಂಗೀತ ಉಪಕರಣಗಳು ರಾತ್ರಿ 10 ರಿಂದ ಬೆಳಗ್ಗೆ 6 ರ ನಡುವೆ ಅನುಮತಿಸಲಾದ ಡೆಸಿಬಲ್ಗಿಂತ ಹೆಚ್ಚು ಸದ್ದು ಮಾಡದಿರುವಂತೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈಗ ಹೈಕೋರ್ಟ್, ಕ್ರಮ ಕೈಗೊಂಡ ವರದಿಯನ್ನು ಎಂಟು ವಾರಗಳೊಳಗೆ ತನ್ನ ಮುಂದೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಹೈಕೋರ್ಟ್ನ ಮತ್ತೊಂದು ವಿಭಾಗೀಯ ಪೀಠವು ಜೂನ್ 17, 2022 ರಂದು, ಧ್ವನಿವರ್ಧಕಗಳ ದುರುಪಯೋಗವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.