ನವದೆಹಲಿ: ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಏಕೈಕ ಸೇನಾಧಿಕಾರಿ ಹಾಗೂ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.
![Gp Capt Varun Singh: Average in studies but soldier par excellence](https://etvbharatimages.akamaized.net/etvbharat/prod-images/13912419_chaurydda_1512newsroom_1639570435_950.jpg)
ಸೇನಾಧಿಕಾರಿಯ ನಿಧನದ ಸುದ್ದಿ ಹಬ್ಬುತ್ತಿದ್ದಂತೆ ಭವಿಷ್ಯದ ಮಕ್ಕಳನ್ನು ಉದ್ದೇಶಿಸಿ ಪ್ರಾಂಶುಪಾಲರೊಬ್ಬರಿಗೆ ಇತ್ತೀಚೆಗೆ ಬರೆದ ಪತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಅವರ ಬರವಣಿಗೆ ಇಂದು ದೇಶದ ಯುವಕರಲ್ಲಿ ಹೊಸ ಉಲ್ಲಾಸ ಬಿತ್ತಿದೆ.
ದುರಂತದಲ್ಲಿ ವರುಣ್ ಸಿಂಗ್ ಅವರಿಗೆ ಶೇ. 90-95 ರಷ್ಟು ಸುಟ್ಟಗಾಯವಾಗಿತ್ತು. ಹೆಲಿಕಾಪ್ಟರ್ ಅವಶೇಷಗಳನ್ನು ನೋಡಿದರೆ ಇದರಲ್ಲಿ ಯಾರೂ ಬದುಕುಳಿಯಲು ಅಸಾಧ್ಯ ಅನ್ನುವಷ್ಟು ಚೂರು ಚೂರಾಗಿತ್ತು. ಆದರೆ, ವರುಣ್ ಸಿಂಗ್ ಓರ್ವ ಹೋರಾಟಗಾರ ಆಗಿದ್ದರಿಂದ ಈವರೆಗೂ ಉಸಿರನ್ನು ಹಿಡಿದಿಟ್ಟುಕೊಂಡಿದ್ದರು ಎಂದು ಹಿರಿಯ IAF ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮೃತ ಸೇನಾಧಿಕಾರಿಯ ಧೈರ್ಯ ಹಾಗೂ ಸಾಹಸದ ಬಗ್ಗೆ ಮಾಹಿತಿ ನೀಡಿದ್ದಾರೆ.
![Gp Capt Varun Singh: Average in studies but soldier par excellence](https://etvbharatimages.akamaized.net/etvbharat/prod-images/13912419_iaf_1512newsroom_1639570435_394.jpg)
ವರುಣ್ ಸಿಂಗ್ ಅವರು ವಿದ್ಯಾರ್ಥಿ ಜೀವನದಲ್ಲಿ ಸಾಧಾರಣ ವ್ಯಕ್ತಿಯಾಗಿದ್ದರೂ ಅವರಲ್ಲಿ ಹೋರಾಟದ ಗುಣಗಳು ತುಂಬಿದ್ದವು. ಹಲವು ಕಾರ್ಯಾಚರಣೆಗಳ ನೇತೃತ್ವ ಸಹ ವಹಿಸಿಕೊಂಡಿದ್ದರು. ಹಲವಾರು ಯುದ್ಧ ವಿಮಾನಗಳನ್ನು ಹಾರಿಸಿ ತಮ್ಮ ಪರಾಕ್ರಮ ಸಾಬೀತು ಮಾಡುವಲ್ಲಿ ಸರ್ವಶ್ರೇಷ್ಠರಾಗಿದ್ದರು. ಅದರಂತೆ ಸಾವಿನಲ್ಲೂ ವರುಣ್ ಸಿಂಗ್ ತಾವು ಓರ್ವ ಹೋರಾಟಗಾರ ಎಂದು ತೋರಿಸಿಕೊಟ್ಟಿದ್ದಾರೆ ಎಂದು ವಿಧಿವಶರಾದ ಸೇನಾಧಿಕಾರಿ ಬಗ್ಗೆ ಅಧಿಕಾರಿಯೊಬ್ಬರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ದುರಂತ ಸಂಭವಿಸಿದಾಗ ಕೇವಲ ಪ್ರಜ್ಞೆ ಕಳೆದುಕೊಂಡಿದ್ದ ವರುಣ್ ಸಿಂಗ್ ಅವರನ್ನು ಅಲ್ಲಿನ ರಕ್ಷಣಾ ತಂಡಗಳು ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಯ ದೃಷ್ಟಿಯಿಂದ ಬೆಂಗಳೂರಿಗೆ ಕರೆತರಲಾಗಿತ್ತು. ಅಂದು ನಡೆದ ಅಪಘಾತದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಸೇನಾಧಿಕಾರಿಗಳು ಮೃತಪಟ್ಟಿದ್ದರು. ಗಾಯಗೊಂಡಿದ್ದ ಏಕೈಕ ಸೇನಾಧಿಕಾರಿ ವರುಣ್ ಸಿಂಗ್ ಇಂದು ನಿಧನರಾಗಿದ್ದಾರೆ.
![Gp Capt Varun Singh: Average in studies but soldier par excellence](https://etvbharatimages.akamaized.net/etvbharat/prod-images/768-512-13912419-thumbnail-3x2-chaurya_1512newsroom_1639570435_179.webp)
ನಾನೂ ಕೂಡ ಸಾಧಾರಣ ವಿದ್ಯಾರ್ಥಿ: ನಾನು ಸಹ ಓರ್ವ ಸಾಧಾರಣ ವಿದ್ಯಾರ್ಥಿ. ನನಗೆ ಪಠ್ಯ ಮತ್ತು ಕ್ರೀಡೆಗಳಿಗಿಂತ ವಾಯುಯಾನ ಬಗ್ಗೆ ತಿಳಿದುಕೊಳ್ಳುವ ಕೌತುಕತೆ ಇತ್ತು. ತಾವು ಹಲವಾರು ಏರ್ಶೋಗಳಲ್ಲಿ ಶಾಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಇಸ್ರೋದ ಗಗನಯಾನ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆ ಎಂದು ತಮ್ಮ ಶಾಲಾ ದಿನಮಾದಲ್ಲಿ ತಾವು ಕಂಡ ಕನಸಿನ ಬಗ್ಗೆ ಪತ್ರದಲ್ಲಿ ವರುಣ್ ಸಿಂಗ್ ಉಲ್ಲೇಖ ಮಾಡಿದ್ದರು.
ಇದನ್ನೂ ಓದಿ : ಪ್ರಾಣ ಪಣಕ್ಕಿಟ್ಟು 'ತೇಜಸ್' ರಕ್ಷಿಸಿದ್ದ ವರುಣ್ ಸಿಂಗ್ಗೆ ಸಿಕ್ಕಿತ್ತು 'ಶೌರ್ಯ ಚಕ್ರ'ದ ಗೌರವ