ಶ್ರೀನಗರ(ಜಮ್ಮು ಕಾಶ್ಮೀರ): ಹವಾಮಾನ ಬದಲಾವಣೆ (Climate Change) ಈಗಿನ ವಿಜ್ಞಾನಿಗಳ ಕಳಕಳಿ. ಪ್ರಸ್ತುತ ಚಳಿಗಾಲ ಆರಂಭವಾಗಿದ್ದು, ದಕ್ಷಿಣ ಭಾರತದ ಹಲವೆಡೆ ವರುಣ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಈ ಬೆನ್ನಲ್ಲೇ ಉತ್ತರದಲ್ಲಿ ಚಳಿಯ ನರ್ತನವೂ ಮುಂದುವರೆದಿದೆ.
ಶುಕ್ರವಾರವಷ್ಟೇ ಜಮ್ಮು ಕಾಶ್ಮೀರದ (Jammu Kashmir) ಬೇಸಿಗೆ ಕಾಲದ ರಾಜಧಾನಿಯಾದ ಶ್ರೀನಗರದಲ್ಲಿ 0.7 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ, ಇಂದು 0.1 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿದೆ. ಇದು ತಾಪಮಾನ ವಿಚಾರದಲ್ಲಿ ಶ್ರೀನಗರಕ್ಕೆ ದಾಖಲೆಯ ವಿಷಯವಾಗಿದೆ.
ಇದಕ್ಕಿಂತ ತೀರಾ ಚಳಿಯಾಗಿ ಮಾರ್ಪಟ್ಟಿರುವ ಪ್ರದೇಶವೆಂದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ಡ್ರಾಸ್ನಲ್ಲಿ. ಇಲ್ಲಿರೋದು ಮೈನಸ್ 12.7 ಡಿಗ್ರಿ ಸೆಲ್ಸಿಯಸ್ ತಾಪಮಾನ. ಅಂದಹಾಗೆ ಇಲ್ಲಿ ಭೀಭತ್ಸ ಚಳಿ ಸಾಮಾನ್ಯ.
ಜಮ್ಮು ಕಾಶ್ಮೀರದ ಪಹಲ್ಗಾಮ್ ಮತ್ತು ಗುಲ್ಮಾರ್ಗ್ನಲ್ಲಿ ಈಗ ಸದ್ಯಕ್ಕೆ ದಾಖಲಾಗಿರುವ ತಾಪಮಾನ ಕ್ರಮವಾಗಿ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ಮತ್ತು ಮೈನಸ್ 0.2 ಡಿಗ್ರಿ ಸೆಲ್ಸಿಯಸ್ನಷ್ಟಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಡ್ರಾಸ್ ಅತ್ಯಂತ ಶೀತ ಪ್ರದೇಶವಾದರೂ, ಅಲ್ಲಿರುವ ಇತರ ಪ್ರದೇಶಗಳಲ್ಲೂ ಭಾರಿ ಚಳಿ ದಾಖಲಾಗಿದೆ. ಲಡಾಖ್ ರಾಜಧಾನಿ ಲೇಹ್ನಲ್ಲಿ (Leh) ಮೈನಸ್ 9.6 ಡಿಗ್ರಿ ಸೆಲ್ಸಿಯಸ್, ಕಾರ್ಗಿಲ್ನಲ್ಲಿ ಮೈನಸ್ 6.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕಡಿಮೆ ಶೀತ ದಾಖಲಾಗಿದೆ.
ಜಮ್ಮು ಪ್ರದೇಶದಲ್ಲಿ 12.2 ಡಿಗ್ರಿ, ಕತ್ರಾದಲ್ಲಿ 11.2 ಡಿಗ್ರಿ, ಬಟೋಟೆಯಲ್ಲಿ 6 ಡಿಗ್ರಿ ಸೆಲ್ಸಿಯಸ್, ಬನಿಹಾಲ್ನಲ್ಲಿ 2 ಡಿಗ್ರಿ, ಭರ್ದೇವಾದಲ್ಲಿ 2.9 ಡಿಗ್ರಿ ಸೆಲ್ಸಿಯಸ್ ಈ ದಿನದಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿದೆ.
ಈಗಿರೋದು ಅಷ್ಟೇ ಅಲ್ಲದೇ ನವೆಂಬರ್ 19ರವರೆಗೆ ಇನ್ನೂ ತಾಪಮಾನ ಕುಸಿಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಲ್ಲಿನ ಜನರಿಗೆ ಮತ್ತಷ್ಟು ಚಳಿಯ ಅನುಭವ ಸಿಗಲಿದೆ.
ಇದನ್ನೂ ಓದಿ: ಕರ್ನಾಟಕ ಬಿಟ್ಕಾಯಿನ್ ಹಗರಣದ ಬಗ್ಗೆ ಪಕ್ಷಪಾತರಹಿತ ತನಿಖೆ ನಡೆಯಬೇಕು : ಸುರ್ಜೇವಾಲಾ