ನವದೆಹಲಿ: ಭಾರತ - ಚೀನಾ ವಿಷಯದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರು, (ರಾಹುಲ್) ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಯಾರು ಬಿಟ್ಟುಕೊಟ್ಟರು ಎಂಬ ಬಗ್ಗೆ ತಮ್ಮ ಅಜ್ಜ (ಮಾಜಿ ಪ್ರಧಾನಿ ಜವಾಹರಲಾಲ್ ನೆಹರು) ಅವರಿಗೆ ಕೇಳಬೇಕು ಎಂದು ಕುಟುಕಿದ್ದಾರೆ.
ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಯಾರು ಬಿಟ್ಟುಕೊಟ್ಟಿದ್ದಾರೆ ಎಂಬ ಬಗ್ಗೆ ಅವರು ತಮ್ಮ ಅಜ್ಜ (ಜವಾಹರಲಾಲ್ ನೆಹರು) ಅವರನ್ನು ಕೇಳಬೇಕು. ಆಗ ಅವರಿಗೆ ಉತ್ತರ ಏನು ಎಂಬುದು ಗೊತ್ತಾಗುತ್ತದೆ ಎಂದು ತಿಳಿಯುತ್ತದೆ ಎಂದು ಎದಿರೇಟು ನೀಡಿದ್ದಾರೆ. ಯಾರು ದೇಶಭಕ್ತರು ಮತ್ತು ಯಾರು ಅಲ್ಲ ಎಂಬುದು ಸಾರ್ವಜನಿಕರಿಗೆ ತಿಳಿದಿದೆ ಎಂದು ಇದೇ ವೇಳೆ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಮತ್ತು ಭಾರತ: ಕಾಣದ ಕಾಂಚಾಣದ ವಿರುದ್ಧ ಸರ್ಕಾರದ ನಿಲುವೇನು.!?
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಆರ್.ಕೆ.ಸಿಂಗ್, ಭಾರತೀಯ ಜನತಾ ಪಕ್ಷದ ಸರ್ಕಾರವು ನೆರೆಯ ರಾಷ್ಟ್ರಗಳಿಗೆ ಭಾರತ ಏನೆಂಬುದನ್ನು ತೋರಿಸಿದೆ. ದಾಳಿ ಮಾಡಿದರೆ ಭಾರತ ಮತ್ತೆ ಹೋರಾಡುತ್ತದೆ. ನಮ್ಮ ಸರ್ಕಾರವು ಸುತ್ತಮುತ್ತಲಿನ ಎಲ್ಲ ದೇಶಗಳಿಗೆ, ವಿಶೇಷವಾಗಿ ಉತ್ತರ ಮತ್ತು ಪಶ್ಚಿಮದಲ್ಲಿ ನೀವು ಭಾರತದ ಮೇಲೆ ದಾಳಿ ಮಾಡಿದರೆ ನಾವು ಮತ್ತೆ ಹೋರಾಡುತ್ತೇವೆ ಮತ್ತು ಜಗತ್ತು ಅದನ್ನು ನೋಡಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರ ಹೇಳಿಕೆ ಅಪಕ್ವವಾಗಿದೆ. ಅವರು ಏನನ್ನೂ ಅರ್ಥಮಾಡಿಕೊಳ್ಳುವುದಿಲ್ಲ. ವಿಷಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ ಎಂದು ಸಿಂಗ್ ಹೇಳಿದರು.