ಲಂಡನ್: ಅತಿ ಭೀಕರವಾದ ಕೋವಿಡ್-19 ಎರಡನೇ ಅಲೆಗೆ ನಲುಗುತ್ತಿರುವ ಭಾರತದ ಬೆಂಬಲಕ್ಕೆ ನಿಲ್ಲುವಂತೆ ತನ್ನ ದೇಶದ ಜನತೆಗೆ ಬ್ರಿಟನ್ ಯುವರಾಜ ಪ್ರಿನ್ಸ್ ಚಾರ್ಲ್ಸ್ ಭಾವುಕವಾದ ಮನವಿ ಮಾಡಿದ್ದಾರೆ.
ಬ್ರಿಟಿಷ್ ಸಾಮ್ರಾಜ್ಯದ ಕುಡಿಯಾದ 72 ವರ್ಷದ ಪ್ರಿನ್ಸ್ ಚಾರ್ಲ್ಸ್ ಭಾರತಕ್ಕೆ ತಾವು ಹಲವಾರು ಬಾರಿ ಭೇಟಿ ನೀಡಿದ್ದನ್ನು ಸ್ಮರಿಸಿದ್ದು, ಭಾರತದೆಡೆಗಿನ ತಮ್ಮ ಅಪಾರವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕೋವಿಡ್ ನಿಂದ ಬಳಲುತ್ತಿರುವ ಭಾರತೀಯರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.
"ಕಳೆದ ಸುಮಾರು ಒಂದು ವರ್ಷದಿಂದ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಕೋವಿಡ್ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆದರೆ ಈ ವಾರ ಭಾರತದಲ್ಲಿನ ಕೋವಿಡ್ ಭೀಕರತೆಯ ದೃಶ್ಯಗಳನ್ನು ನೋಡಿ ನನಗೆ ಆಘಾತವಾಗಿದೆ." ಎಂದು ಪ್ರಿನ್ಸ್ ಹೇಳಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಭಾರತೀಯ ಸಮುದಾಯದ ಜನತೆಯ ಬೆಂಬಲದೊಂದಿಗೆ ಭಾರತದ ಸಹಾಯಕ್ಕಾಗಿ ಬ್ರಿಟಿಷ್ ಏಶಿಯನ್ ಟ್ರಸ್ಟ್ ತುರ್ತು ನೆರವನ್ನು ಬೇಡುತ್ತಿದೆ. ಅನೇಕ ಜನರು, ಸಂಘ-ಸಂಸ್ಥೆಗಳು, ವ್ಯಾಪಾರೋದ್ಯಮಿಗಳು, ಟ್ರಸ್ಟ್ಗಳು ಈ ಕೆಲಸದಲ್ಲಿ ಈಗಾಗಲೇ ನಮಗೆ ಕೈಜೋಡಿಸಿದ್ದಾರೆ. ನೆರವಿನ ಅತಿ ಅಗತ್ಯವಿರುವ ಭಾರತಕ್ಕೆ ನಾವು ಸಾಕಷ್ಟು ಸಹಾಯ ಮಾಡಲು ಸಾಧ್ಯವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ." ಎಂದು ಪ್ರಿನ್ಸ್ ತಿಳಿಸಿದ್ದಾರೆ.
ಇತರ ಅನೇಕರಂತೆ ನಾನೂ ಸಹ ಭಾರತದೆಡೆಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದೇನೆ. ಭಾರತಕ್ಕೆ ನೀಡಿದ ಪ್ರತಿಯೊಂದು ಭೇಟಿಯನ್ನೂ ನಾನು ಆಸ್ವಾದಿಸಿದ್ದೇನೆ. ಕೋವಿಡ್ ಸಮಯದಲ್ಲಿ ಭಾರತವು ಇತರ ಅನೇಕ ರಾಷ್ಟ್ರಗಳಿಗೆ ಸಹಾಯ ಮಾಡಿದೆ. ಆದರೆ ಈಗ ನಾವೆಲ್ಲ ಭಾರತದ ಸಹಾಯಕ್ಕೆ ನಿಲ್ಲುವ ಸಮಯ ಬಂದೊದಗಿದ್ದು, ಈ ಹೋರಾಟವನ್ನೂ ನಾವು ಗೆಲ್ಲಲಿದ್ದೇವೆ ಎಂದು ಚಾರ್ಲ್ಸ್ ಆಶಾವಾದ ವ್ಯಕ್ತಪಡಿಸಿದ್ದಾರೆ.