ಸಂಗ್ರೂರು (ಪಂಜಾಬ್): ಸುನಮ್ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಇಂದು (ಗುರುವಾರ) ನಡೆದಿದೆ. ಟ್ಯಾಂಕರ್ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 6 ಜೀವಗಳು ಬಲಿಯಾಗಿವೆ. ಕಾರಿನಲ್ಲಿ ಹೊರಟ್ಟಿದ್ದ ಆರು ಜನರು ಮಲೇರಕೋಟ್ಲದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಇದೇ ವೇಳೆ, ಮಾರ್ಗಮಧ್ಯೆ ಟ್ಯಾಂಕರ್ ವೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ, ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೂವರ ಶವಗಳನ್ನು ಸುನಮ್ ಆಸ್ಪತ್ರೆಗೆ ಹಾಗೂ ಇನ್ನೂ ಮೂವರ ಮೃತದೇಹಗಳನ್ನು ಸಂಗ್ರೂರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರತ್ಯಕ್ಷದರ್ಶಿ ಹೇಳುವುದಿಷ್ಟು: ಅಪಘಾತ ಕುರಿತಂತೆ ಮಾತನಾಡಿರುವ ಅಪಘಾತದಲ್ಲಿ ಗಾಯಗೊಂಡಿರುವ ವಿಜಯ್ ಕುಮಾರ್, ಸರಿಯಾದ ದಾರಿಯಲ್ಲೇ ಸಾಗುತ್ತಿದ್ದ ಕಾರು, ರಾಂಗ್ ಸೈಡ್ನಲ್ಲಿ ಬರುತ್ತಿದ್ದ ಟಾಂಕರ್ಗೆ ಡಿಕ್ಕಿ ಹೊಡೆದ ಆಗ ಆ ಕಾರು ನನ್ನ ಕಾರಿಗೂ ಸಹ ಗುದ್ದಿದೆ. ನಾನು ಸುನಮ್ ಪ್ರದೇಶಕ್ಕೆ ತೆರಳುತ್ತಿದ್ದಾಗ ಅಪಘಾತ ಜರುಗಿದೆ. ಘಟನೆಯಲ್ಲಿ ನನಗೂ ತೀವ್ರ ಗಾಯವಾಗಿದೆ'' ಅಂದ ಹಾಗೆ ಈ ದುರ್ಘಟನೆಯಲ್ಲಿ ಮಗು ಸೇರಿ ಆರು ಮಂದಿ ಸ್ಥಳದಲ್ಲೇ ಅಸು ನೀಗಿದರು. ಇದೊಂದು ಭಯಾನಕರ ದುರ್ಘಟನೆ ಎಂದು ವಿಜಯ್ ಕುಮಾರ್ ಹೇಳಿದರು. ಇನ್ನು ಈ ದುರಂತದಲ್ಲಿ ಮೃತಪಟ್ಟವರು ಪಂಜಾಬ್ನ ಸುನಮ್ ಪ್ರದೇಶಕ್ಕೆ ಸೇರಿದ್ದಾರೆ.
ಇದನ್ನೂ ಓದಿ: ಅಡಿಕೆ ವ್ಯಾಪಾರಿಯನ್ನು ಯಾಮಾರಿಸಿ ₹1 ಕೋಟಿ ದೋಚಿದ್ದ ಕಾರು ಚಾಲಕ ಸೇರಿ ನಾಲ್ವರ ಬಂಧನ
ಇತ್ತೀಚಿನ ಘಟನೆ, ರಸ್ತೆ ಅಪಘಾತ: ಮೃತರ ಸಂಖ್ಯೆ 13ಕ್ಕೆ ಏರಿಕೆ: ಇನ್ನೊಂದೆಡೆ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಅಕ್ಟೋಬರ್ 26ರಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದರು. 10ಕ್ಕೂ ಹೆಚ್ಚು ಮಂದಿ ಸ್ಪಾಟ್ನಲ್ಲೇ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿಯ ಆರ್ಟಿಒ ಕಚೇರಿ ಸಮೀಪ ಹೆದ್ದಾರಿ ಬಳಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಸಂಚಾರ ಮಾಡುತ್ತಿದ್ದ ಟಾಟಾ ಸುಮೊ ಡಿಕ್ಕಿ ಹೊಡೆದಿತ್ತು. ಅಪಘಾತ ಸಂಭವಿಸಿದ ಸ್ಥಳದಲ್ಲೇ 12 ಜನರು ಮೃತಪಟ್ಟಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದನು. ಮೃತರಲ್ಲಿ ಎಂಟು ಜನ ಪುರುಷರು, ನಾಲ್ವರು ಮಹಿಳೆಯರು, ಒಂದು ಮಗು ಮೃತಪಟ್ಟಿತ್ತು. ಮೃತರೆಲ್ಲರೂ ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಗೋರಂಟ್ಲ ಗ್ರಾಮದವರು ಎಂಬುದು ತಿಳಿದುಬಂದಿತ್ತು.