ರೇವಾ, ಮಧ್ಯಪ್ರದೇಶ: ಜಿಲ್ಲೆಯ ಸೋಹಗಿ ಪರ್ವತದಲ್ಲಿ ಮಧ್ಯರಾತ್ರಿ ಹೃದಯ ವಿದ್ರಾವಕ ರಸ್ತೆ ಅಪಘಾತ ಸಂಭವಿಸಿದೆ. ಇದರಲ್ಲಿ 15 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಆರಂಭಿಸಿದ್ದಾರೆ.

ಕಾರ್ಮಿಕರನ್ನು ತುಂಬಿದ್ದ ಬಸ್ ಬ್ಯಾಲೆಸ್ಟ್ ಲೋಡ್ ಮಾಡಿದ ಟ್ರಕ್ಗೆ ಡಿಕ್ಕಿ: ದೀಪಾವಳಿ ಹಬ್ಬವನ್ನು ಆಚರಿಸಲು ಹೈದರಾಬಾದ್ನಿಂದ ಪ್ರಯಾಣಿಕರು ಲಖನೌದಲ್ಲಿರುವ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಹೈದರಾಬಾದ್ನಿಂದ ಕಟ್ನಿಗೆ ತಲುಪಿತು. ಕಟ್ನಿಯಲ್ಲಿ ಹೆಚ್ಚಿನ ಪ್ರಯಾಣಿಕರು ತುಂಬಿದ ನಂತರ ಬಸ್ ಉತ್ತರ ಪ್ರದೇಶದ ಲಖನೌಗೆ ಸಾಗಿತು. ರೇವಾದ ಸೊಹಗಿ ತಲುಪಿದ ತಕ್ಷಣ ಅನಿಯಂತ್ರಿತ ಬಸ್ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಡಿಕ್ಕಿ ರಭಸಕ್ಕೆ 15 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಸ್ನಲ್ಲಿ 100ಕ್ಕೂ ಹೆಚ್ಚು ಜನರ ಪ್ರಯಾಣ: ಮಾಹಿತಿ ಪ್ರಕಾರ ಬಸ್ನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಬಸ್ ಸೊಹಗಿ ಪರ್ವತದ ಬಳಿ ತಲುಪುತ್ತಿದ್ದಂತೆಯೇ ಬಸ್ಸಿನ ಮುಂದೆ ಹೋಗುತ್ತಿದ್ದ ಲಾರಿ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಟ್ರಕ್ ರಸ್ತೆಯಲ್ಲೇ ನಿಂತಿದೆ. ಟ್ರಕ್ ಹಿಂದೆ ಬರುತ್ತಿದ್ದ ಅತಿವೇಗದಲ್ಲಿ ಬರುತ್ತಿದ್ದ ಬಸ್ ಅನಿಯಂತ್ರಣಗೊಂಡು ಟ್ರಕ್ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬಸ್ನ ಮುಂಭಾಗದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಯುಪಿ, ಬಿಹಾರ, ನೇಪಾಳ ನಿವಾಸಿಗಳು ಸಾವು: ಈ ಅಪಘಾತದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಮೃತಪಟ್ಟವರಲ್ಲಿ ಎಲ್ಲ ಪ್ರಯಾಣಿಕರು ಉತ್ತರ ಪ್ರದೇಶ, ಬಿಹಾರ ಮತ್ತು ನೇಪಾಳದ ನಿವಾಸಿಗಳಾಗಿದ್ದಾರೆ. ಸಂಬಂಧಪಟ್ಟ ಕುಟುಂಬಗಳಿಗೆ ಮಾಹಿತಿ ರವಾನಿಸಲು ಪೊಲೀಸ್ ಇಲಾಖೆ ನಿರತವಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ಮತ್ತು ಎಸ್ಪಿ: ಘಟನೆಗೆ ಕೆಲವು ನಿಮಿಷಗಳ ಮೊದಲು ರೇವಾ ಜಿಲ್ಲೆಯ ಟ್ಯೋಂಥರ್ ತಹಸಿಲ್ನ ವಿದ್ಯುತ್ ಇಲಾಖೆಯಲ್ಲಿ ಡಿಇ ಆಗಿ ನಿಯೋಜಿತರಾಗಿರುವ ಸುಶೀಲ್ ಯಾದವ್ ಅವರು ರೇವಾದಿಂದ ಪ್ರಯಾಣಿಸಿದ್ದರು. ಘಟನೆ ನಡೆದ 2 ನಿಮಿಷದ ನಂತರ ಅವರು ಸ್ಥಳಕ್ಕೆ ತಲುಪಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ತಂಡ ಕೂಡ ಸ್ಥಳಕ್ಕೆ ತಲುಪಿದ್ದು, ಘಟನಾ ಸ್ಥಳವು ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಮತ್ತು ಎಸ್ಪಿ ನವನೀತ್ ಭಾಸಿನ್ ಎಲ್ಲಾ ಆಡಳಿತ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ಪ್ರಾರಂಭಿಸಿದರು.
ಚಾಲಕನಿಗೆ ಸರಿಯಾಗಿ ಗೇರ್ ಬದಲಾಯಿಸಲು ಸಾಧ್ಯವಾಗಲಿಲ್ಲ: ಟ್ರಕ್ ಮೊದಲು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲೇ ನಿಂತಿದೆ. ಬಳಿಕ ಟ್ರಕ್ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ನ ಮುಂಭಾಗದಲ್ಲಿ ಕುಳಿತಿದ್ದ 15 ಕಾರ್ಮಿಕರು ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. 40 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಗೆ ಬಸ್ಸಿನ ಗೇರ್ ಸರಿಯಾಗಿ ಬದಲಾಯಿಸಲು ಸಾಧ್ಯವಾಗದ ಕಾರಣ ಈ ಅವಘಡ ಸಂಭವಿಸಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇದೀಗ ಪೊಲೀಸ್ ತಂಡ ಸರಣಿ ಅಪಘಾತದ ಬಗ್ಗೆ ತನಿಖೆ ಕೈಗೊಂಡಿದ್ದು, ಮುಂದಿನ ಕ್ರಮ ಅನುಸರಿಸಿದೆ.
ಓದಿ: ರಸ್ತೆ ಅಪಘಾತದಲ್ಲಿ ತಂದೆ ಸಾವು: ಮಗು ನಾಮಕರಣ ಖುಷಿಯಲ್ಲಿದ್ದ ಮನೆಯಲ್ಲಿ ಶೋಕ