ಅಮರಾವತಿ : ತೆಲುಗು ದೇಶಂ ಪಕ್ಷದ ಹತ್ತು ಶಾಸಕರನ್ನು ಆಂಧ್ರ ಪ್ರದೇಶ ವಿಧಾನಸಭೆಯಿಂದ ಸತತ ಐದನೇ ದಿನ, ಅಂದರೆ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರದಂದೂ ಅಮಾನತುಗೊಳಿಸಲಾಗಿದೆ.
ತಮ್ಮ ಪಕ್ಷದ ಶಾಸಕರ ಅಮಾನತು ವಿರೋಧಿಸಿ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಸೇರಿದಂತೆ ಉಳಿದ ಎಲ್ಲಾ ಟಿಡಿಪಿ ಸದಸ್ಯರು ಪ್ರತಿಭಟಿಸಿ ಸದನದಿಂದ ಹೊರ ನಡೆದರು.
ಸದನದಲ್ಲಿ ನರೇಗಾ ಯೋಜನೆಯಡಿ ಬಾಕಿ ಇರುವ ಪಾವತಿಗಳ ಕುರಿತು ತಕ್ಷಣ ಚರ್ಚೆ ಕೋರಿ ಟಿಡಿಪಿ ಮನವಿ ಸಲ್ಲಿಸಿತ್ತು. ಆದರೆ ಈ ಕೋರಿಕೆಯನ್ನು ಸ್ಪೀಕರ್ ತಮ್ಮಿನೆನಿ ಸೀತಾರಾಮ್ ತಿರಸ್ಕರಿಸಿದರು. ಆಗ ಟಿಡಿಪಿ ಶಾಸಕರು ನರೇಗಾ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು ಮತ್ತು ಸದನದ ಬಾವಿಗಿಳಿದು ಪ್ರತಿಭಟಿಸಿದರು. ನರೇಗಾ ಯೋಜನೆಯ ಲಕ್ಷಾಂತರ ಕಾರ್ಮಿಕರಿಗೆ ಒಂದು ವರ್ಷದಿಂದ ವೇತನ ನೀಡಿಲ್ಲ, ಹೀಗಾಗಿ ಇದು ಅತ್ಯಂತ ಮಹತ್ವದ ವಿಷಯವೆನಿಸಿದೆ.
ಓದಿ: ರಾಗಿಣಿ ಜಾಮೀನು ಅರ್ಜಿ ವಿಚಾರಣೆ: ವಿವರ ಕೇಳಿ ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್
ಈ ವೇಳೆ ಮಾತನಾಡಿದ ಸ್ಪೀಕರ್, 'ನೀವು ಪ್ರತಿದಿನ ಸದನ ನಡೆಯಲು ಅಡ್ಡಿಪಡಿಸುತ್ತಿದ್ದೀರಿ. ನಿಮ್ಮನ್ನು ಅಮಾನತುಗೊಳಿಸಬೇಕಾಗಿರುವುದು ನನಗೆ ನೋವು ತಂದಿದೆ. ಆದರೆ ನನಗೆ ಬೇರೆ ದಾರಿಯಿಲ್ಲ' ಎಂದರು. ಆಗ ಮಾಹಿತಿ ಸಚಿವ ಪೆರ್ನಿ ವೆಂಕಟರಮಯ್ಯ ವಿಪಕ್ಷದ ಸದಸ್ಯರನ್ನು ಅಮಾನತುಗೊಳಿಸುವಂತೆ ನಿರ್ಣಯ ಮಂಡಿಸಿದರು ಮತ್ತು ಅದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.