ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಬೆಳಿಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಸುಮಾರು 15,000ಕ್ಕೂ ಹೆಚ್ಚು ಜನರು ಕೈಯಲ್ಲಿ ಪೊರಕೆ, ಬುಟ್ಟಿಗಳನ್ನು ಹಿಡಿದು ಬೀದಿ ಸ್ವಚ್ಛಗೊಳಿಸಿದರು. ಸ್ವಚ್ಛ ಹುಬ್ಬಳ್ಳಿ-ಸ್ವಚ್ಛ ಭಾರತ ಅಭಿಯಾನದಡಿ ಡಾ.ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಸಾರಥ್ಯದಲ್ಲಿ ನಗರ ಶುದ್ಧೀಕರಣ ಕೆಲಸ ನಡೆಯಿತು. ಜನಜಂಗುಳಿಯಿಂದಾಗಿ ಸದಾ ಕಸದ ರಾಶಿಯಿಂದ ತುಂಬಿರುತ್ತಿದ್ದ ಎಪಿಎಂಸಿ, ಬಸ್ ನಿಲ್ದಾಣ ಹೀಗೆ ನಗರದ ಪ್ರಮುಖ ಪ್ರದೇಶಗಳಲ್ಲಿ, ಬೀದಿ ಬೀದಿಗಳಲ್ಲಿ ಸ್ವಚ್ಛತಾ ಕೆಲಸ ನೆರವೇರಿತು.
2,500 ಟನ್ ತ್ಯಾಜ್ಯ ಹೊರ ಹಾಕುವ ಗುರಿ:ಸ್ವಚ್ಛತಾ ಅಭಿಯಾನದಲ್ಲಿ ಸರಿಸುಮಾರು 2,500 ಟನ್ನಷ್ಟು ತ್ಯಾಜ್ಯವನ್ನು ನಗರದಿಂದ ಹೊರಹಾಕುವ ಗುರಿಯೊಂದಿಗೆ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದಾರೆ. ಇದಕ್ಕೆ ಮಹಾನಗರ ಪಾಲಿಕೆ ಕೈ ಜೋಡಿಸಿದೆ. ತ್ಯಾಜ್ಯ ಸಾಗಿಸಲು ಪಾಲಿಕೆ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೊರ ಊರುಗಳಿಂದ ಬರುವವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಸ್, ರೈಲಿನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದಾರೆ.