ಬೆಂಗಳೂರು: "ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ನಾನು ಸರ್ಕಾರಿ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಪಡೆದಿಲ್ಲ. ಅವರಿಗೆ ಅಧಿಕಾರ ಇದೆ, ಏನು ಬೇಕಾದರೂ ಮಾಡುತ್ತಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ತಮಗೆ ಸೇರಿದ ಜಮೀನನ್ನು ನಾನು 40 ವರ್ಷಗಳ ಹಿಂದೆಯೇ ಖರೀದಿಸಿದ್ದೇನೆ. ಈ ಹಿಂದೆಯೇ ಹತ್ತಾರು ಬಾರಿ ಸರ್ವೇ, ತನಿಖೆ ಎಲ್ಲವೂ ನಡೆದಿದೆ. ಈಗ ಮತ್ತೆ ನಿನ್ನೆ ಸರ್ವೇ ಕಾರ್ಯ ನಡೆಸಿದ್ದಾರೆ. ತನಿಖೆ ಮಾಡುವುದಕ್ಕೆ ನಾನು ಮುಕ್ತ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ" ಎಂದು ಹೇಳಿದರು.
ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ: "ನನ್ನನ್ನು ಟಾರ್ಗೆಟ್ ಮಾಡಿ ಸರ್ವೇ ಮಾಡಿಸುತ್ತಿದ್ದಾರೆ. ಇದರಲ್ಲಿ ಸಂಶಯವೇ ಬೇಡ. ಯಾವುದೇ ತನಿಖೆ ಮಾಡಲಿ, ನಾನು ಮುಕ್ತವಾಗಿದ್ದೇನೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ಸರ್ಕಾರಿ ಜಮೀನು ಲೂಟಿ ಮಾಡಿಲ್ಲ. ಕೇತಗಾನಹಳ್ಳಿಯ ತಮ್ಮ ಜಮೀನಿಗೆ ಸಂಬಂಧಿಸಿದಂತೆ ನಿನ್ನೆ ಕಾಂಗ್ರೆಸ್ನ ಕೆಲ ಪುಡಾರಿಗಳು ದೂರುದಾರನನ್ನು ಕರೆಸಿ ಮಾತನಾಡಿಸಿದ್ದಾರೆ. 40 ವರ್ಷ ಇಲ್ಲದ ದೂರುದಾರರು ಈಗ ಹೇಗೆ ಉದ್ಭವವಾದರು ಎಂದು ಪ್ರಶ್ನಿಸಿದ ಅವರು, ತನಿಖೆ ನಡೆಸಲಿ, ನನ್ನದೇನೂ ತಕರಾರಿಲ್ಲ. ಸರ್ವೇ ನಡೆಸುವಂತೆ ಜಿಲ್ಲಾಧಿಕಾರಿಗಳಿಗೂ ಹೇಳಿದ್ದೇನೆ" ಎಂದರು.
"40 ವರ್ಷಗಳಿಂದ ನನ್ನನ್ನು ಗುರಿಯಾಗಿಸಿ ಈ ರೀತಿಯ ತನಿಖೆಗಳನ್ನು ನಡೆಸುತ್ತಿದ್ದಾರೆ. 1986-87ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ರಾಮಚಂದ್ರ ಎನ್ನುವವರು ಅಂದಿನ ಮುಖ್ಯಮಂತ್ರಿ, ಪ್ರಧಾನಿ, ಗೃಹ ಸಚಿವರಿಗೆ ದೂರು ನೀಡಿ ಕಾನೂನುಬಾಹಿರ ಭೂಮಿ ಖರೀದಿ ಮಾಡಿದ್ದಾರೆ ಎಂದೆಲ್ಲಾ ಹೇಳಿದ್ದರು. ಎಲ್ಲಾ ದಾಖಲೆಗಳು ನನ್ನ ಬಳಿ ಇದೆ. ನನ್ನನ್ನು ಟಾರ್ಗೆಟ್ ಮಾಡಿ ಎಷ್ಟು ಬಾರಿ ತನಿಖೆ ನಡೆಸುತ್ತೀರಿ, 2023ರ ಮಾರ್ಚ್ನಲ್ಲಿ ಲೋಕಾಯುಕ್ತ ವರದಿ ಕೊಟ್ಟಿದೆ. ಸಿದ್ದರಾಮಯ್ಯ ಅವರು ಏನೇನು ಸಭೆ ಮಾಡಿಸಿದ್ದಾರೆ, ಯಾರನ್ನು ಕರೆಸಿಕೊಂಡು ಮೀಟಿಂಗ್ ಮಾಡಿದ್ದಾರೆ ಎಲ್ಲವೂ ಗೊತ್ತಿದೆ" ಎಂದು ಹೇಳಿದರು.