ಕರ್ನಾಟಕ

karnataka

ETV Bharat / state

ತುಮಕೂರು ಲೋಕಸಭಾ ಅಖಾಡದಲ್ಲಿ ಸ್ಥಳೀಯ vs ವಲಸಿಗ ಅಭ್ಯರ್ಥಿ ಚರ್ಚೆ: ಮತದಾರರ ಆಯ್ಕೆ ಯಾರು? - Tumakuru Lok Sabha Profile

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಮತ್ತು ಬಿಜೆಪಿ-ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಅಖಾಡ ದಿನದಿನವೂ ರಂಗೇರುತ್ತಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮಠ, ಮಂದಿರಗಳಿಗೆ ಭೇಟಿಗೆ ನೀಡುತ್ತಿದ್ದು, ರೋಡ್ ಶೋಗಳ ಮೂಲಕ ಮತಬೇಟೆ ನಡೆಸುತ್ತಿದ್ದಾರೆ.

By ETV Bharat Karnataka Team

Published : Apr 15, 2024, 7:11 PM IST

ತುಮಕೂರು ಲೋಕಸಭಾ ಕ್ಷೇತ್ರ
ತುಮಕೂರು ಲೋಕಸಭಾ ಕ್ಷೇತ್ರ

ತುಮಕೂರು:ತುಮಕೂರು ಕ್ಷೇತ್ರ ಲೋಕಸಭಾ ಚುನಾವಣೆಗೆ ಸಜ್ಜಾಗಿದೆ. ಕಣದಲ್ಲಿರುವ ಬಿಜೆಪಿಯ ವಿ.ಸೋಮಣ್ಣ ಹಾಗೂ ಕಾಂಗ್ರೆಸ್​ನ ಮುದ್ದಹನುಮೇಗೌಡ ನಡುವೆ ಮೇಲ್ನೋಟಕ್ಕೆ ನೇರ ಸ್ಪರ್ಧೆ ಕಾಣುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯರು vs ವಲಸಿಗರೆಂಬ ಅಸ್ತ್ರ ಪ್ರಯೋಗವಾಗುತ್ತಿರುವುದು ವಿಶೇಷ.

ಮುದ್ದಹನುಮೇಗೌಡ ನಾಮಪತ್ರ ಸಲ್ಲಿಕೆ

ಈ ನಿಟ್ಟಿನಲ್ಲಿ ಆರೋಪ-ಪ್ರತ್ಯಾರೋಪ, ಹಣ, ಜಾತಿ, ಗ್ಯಾರಂಟಿ ಯೋಜನೆಗಳು, ಮೋದಿ ಮುಖ ಎಂಬೆಲ್ಲಾ ಪ್ರಮುಖ ವಿಚಾರಗಳು ಮುನ್ನೆಲೆಯಲ್ಲಿವೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಪ್ರತಿನಿತ್ಯ ಕ್ಷೇತ್ರ ಸಂಚಾರ, ಮಠ-ಮಂದಿರಗಳ ಭೇಟಿಗಿಳಿದಿದ್ದು, ರೋಡ್ ಶೋಗಳ ಮೂಲಕ ಮತಯಾಚಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಇನ್ನು, ವಲಸಿಗ ಎಂಬ ಚರ್ಚೆಗೆ ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ಮುದ್ದಹನುಮೇಗೌಡ, ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಪರಮೇಶ್ವರ್ ಕೂಡ ವಲಸಿಗರೇ ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ. ಇದರ ಹೊರತಾಗಿ ಸುಭದ್ರ ದೇಶ ನಿರ್ಮಾಣ, 10 ಸಾವಿರ ಕೋಟಿ ಪ್ಯಾಕೇಜ್ ಅನುದಾನ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೀಗೆ ಅನೇಕ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಿಟ್ಟು ಅವರು ಮತಯಾಚನೆ ಮಾಡುತ್ತಿದ್ದಾರೆ.

ಇನ್ನೊಂದೆಡೆ, ಮುದ್ದಹನುಮೇಗೌಡ ಹಾಲಿ ಸಂಸದರ ಕಾರ್ಯವೈಖರಿಯನ್ನು ಟೀಕಿಸುವುದರ ಬದಲಿಗೆ, "ನಮ್ಮದು ಟೀಕೆ ಟಿಪ್ಪಣಿ ರಾಜಕಾರಣವಲ್ಲ, ಅಭಿವೃದ್ಧಿ ಪರವಾದ ರಾಜಕಾರಣ" ಎನ್ನುತ್ತಾ ಮುಂದಡಿ ಇರಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರ

ಕ್ಷೇತ್ರದ ಇತಿಹಾಸ:1952ರಿಂದ ಕಾಂಗ್ರೆಸ್ ಭದ್ರಕೋಟೆಯಾಗಿರುವ ತುಮಕೂರಿನಲ್ಲಿ 1991ರಲ್ಲಿ ಎಸ್.ಮಲ್ಲಿಕಾರ್ಜುನಯ್ಯ ಅವರು ಗೆಲ್ಲುವ ಮೂಲಕ ಭಾರತೀಯ ಜನತಾ ಪಾರ್ಟಿಗೆ ನೆಲೆ ಕಲ್ಪಿಸಿದ್ದರು. ಈವರೆಗೆ ನಡೆದಿರುವ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 10, ಬಿಜೆಪಿ 5 ಹಾಗೂ ಜನತಾದಳ ಮತ್ತು ಪ್ರಜಾ ಸೋಶಿಯಲಿಸ್ಟ್ ಪಕ್ಷಕ್ಕೆ ತಲಾ ಒಂದೊಂದು ಬಾರಿ ಗೆಲುವು ಸಿಕ್ಕಿದೆ. 1962ರಲ್ಲಿ ಅಜಿತ್ ಪ್ರಸಾದ್ ಜೈನ್(ಕಾಂಗ್ರೆಸ್), 1996ರಲ್ಲಿ ಮಂಜುನಾಥ್(ಕಾಂಗ್ರೆಸ್), 2009ರಲ್ಲಿ ಕೋದಂಡರಾಮಯ್ಯ (ಕಾಂಗ್ರೆಸ್), 2014ರಲ್ಲಿ ಎ.ಕೃಷ್ಣಪ್ಪ (ಜೆಡಿಎಸ್), 2019ರಲ್ಲಿ ಹೆಚ್​​.ಡಿ.ದೇವೇಗೌಡ (ಕಾಂಗ್ರೆಸ್-ಜೆಡಿಎಸ್ ಮೈತ್ರಿ) ಅವರು ವಲಸೆ ಬಂದು ಸ್ಪರ್ಧಿಸಿದ್ದರು. ಈ ಐವರಲ್ಲಿ ಅಜಿತ್ ಪ್ರಸಾದ್ ಜೈನ್ ಒಬ್ಬರನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಈವರೆಗೂ ಯಾವ ವಲಸಿಗರೂ ಗೆದ್ದ ಉದಾಹರಣೆ ಇಲ್ಲ.

ಮತದಾರರ ವಿವರ: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 16,51,403 ಮಂದಿ ಮತದಾರರಿದ್ದು, ಎಸ್ಸಿ, ಎಸ್ಟಿಯಿಂದ 5.50 ಲಕ್ಷಕ್ಕೂ ಹೆಚ್ಚು ಹಾಗೂ 2 ಲಕ್ಷಕ್ಕೂ ಅಧಿಕ ಕುರುಬ ಸಮುದಾಯದ ಮತಗಳು, 2.90 ಲಕ್ಷ ಅಲ್ಪಸಂಖ್ಯಾತ ಮತಗಳು ಹಾಗೂ 3 ಲಕ್ಷಕ್ಕೂ ಅಧಿಕ ಒಕ್ಕಲಿಗ ಮತಗಳು ಮತ್ತು 3 ಲಕ್ಷಕ್ಕೂ ಹೆಚ್ಚು ವೀರಶೈವ, ಲಿಂಗಾಯತ ಮತಗಳಿವೆ. ಉಪ್ಪಾರ, ತಿಗಳ, ಮಡಿವಾಳ ಹಾಗೂ ಗೊಲ್ಲರ ಮತಗಳು ನಿರ್ಣಾಯಕವಾಗಿವೆ.

ತುಮಕೂರು ಲೋಕಸಭಾ ಕ್ಷೇತ್ರ

ಪಕ್ಷಗಳ ಬಲಾಬಲ:ತುಮಕೂರು ಲೋಕಸಭಾ ಕ್ಷೇತ್ರವು ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಗುಬ್ಬಿ, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು ಈ ಪೈಕಿ 2 ಸ್ಥಾನ ಬಿಜೆಪಿ, 2 ಸ್ಥಾನ ಜೆಡಿಎಸ್ ಹಾಗೂ 4 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಪಕ್ಷಗಳ ಶಾಸಕರು ತಮ್ಮ ಮತಗಳನ್ನು ತಮ್ಮ ಅಭ್ಯರ್ಥಿಗೆ ಶಿಫ್ಟ್ ಮಾಡಲು ಸಫಲರಾಗುತ್ತಾರಾ? ಅಥವಾ ಬಂಡಾಯದಿಂದ ಸಿಡಿದ ಕಾಂಗ್ರೆಸ್ ಮತಗಳು ಮೈತ್ರಿ ಸೇರಲಿವೆಯಾ? ಅಥವಾ ಮೈತ್ರಿ ಮತಗಳು ಒಡೆದು ಕಾಂಗ್ರೆಸ್ ಸೇರಲಿವೆಯಾ ಎಂಬುದು ಫಲಿತಾಂಶದ ಗುಟ್ಟು.

ಕಳೆದ 3 ಚುನಾವಣೆಗಳ ಮಾಹಿತಿ:2009ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹಾಗೂ ಜೆಡಿಎಸ್​​ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. 3,31,064 ಮತಗಳನ್ನು ಪಡೆದ ಬಸವರಾಜು ಅವರು ಈ ಕ್ಷೇತ್ರದಿಂದ ಸಂಸದರಾದರು. ಜನತಾದಳ (ಜಾತ್ಯತೀತ) ಅಭ್ಯರ್ಥಿ ಮುದ್ದಹನುಮೇಗೌಡ ಒಟ್ಟು 3,09,619 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದರು. 13,88,773 ಮತದಾರರಿದ್ದ ಕ್ಷೇತ್ರದಲ್ಲಿ ಒಟ್ಟು ಮಾನ್ಯ ಮತಗಳ ಸಂಖ್ಯೆ 899784.

ತುಮಕೂರು ಲೋಕಸಭಾ ಕ್ಷೇತ್ರ

2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮತ್ತೆ ಕಣಕ್ಕಿಳಿದಿದ್ದರೆ, ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಎಸ್.ಪಿ.ಮುದ್ದಹನುಮೇಗೌಡ ಈ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದರು. ಎಸ್.ಪಿ.ಮುದ್ದಹನುಮೇಗೌಡ 74,241 ಮತಗಳ ಅಂತರದಿಂದ ಗೆದ್ದು ಬೀಗಿದರೆ, ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ 3,55,827 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದರು. 2014ರಲ್ಲಿ 15,18,518 ಮತದಾರರಿದ್ದ ಕ್ಷೇತ್ರದಲ್ಲಿ 10,88,550 ಮತಗಳು ಮಾನ್ಯವಾಗಿದ್ದವು.

2019ರಲ್ಲಿ ನಡೆದ ಚುನಾವಣೆಯಲ್ಲಿ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಜಿ.ಎಸ್.ಬಸವರಾಜ್ ಕಣಕ್ಕಿಳಿದಿದ್ದರು. ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರನ್ನು ಸೋಲಿಸುವ ಮೂಲಕ ಜಿ.ಎಸ್.ಬಸವರಾಜ್ ಮತ್ತೆ ಈ ಕ್ಷೇತ್ರದಿಂದ ಸಂಸದರಾದರು. ಅವರು 5,96,127 ಮತಗಳನ್ನು ಪಡೆದರೆ, ದೇವೇಗೌಡರು 5,82,788 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದರು. 16,08,545 ಮತಗಳಲ್ಲಿ 12,34,563 ಮಾನ್ಯವಾಗಿವೆ.

ತುಮಕೂರು ಲೋಕಸಭಾ ಕ್ಷೇತ್ರ

2024ರಲ್ಲಿಸ್ಥಳೀಯ vs ವಲಸಿಗ ಪೈಪೋಟಿ:2024ರ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಮತ್ತು ವಲಸಿಗ ಚರ್ಚೆ ಶುರುವಾಗಿದೆ. ಈ ಮಧ್ಯೆ ಸೋಮಣ್ಣ, ಕ್ಷೇತ್ರ ಸಂಚಾರ, ಕಾರ್ಯಕರ್ತರು, ಮುಖಂಡರ ಮನೆಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಂಡಿದ್ದಾರೆ. ನಾನು ಗೆದ್ದರೆ ಜಿಲ್ಲೆಗೆ 10 ಸಾವಿರ ಕೋಟಿ ಅನುದಾನದ ಪ್ಯಾಕೇಜ್ ಎನ್ನುತ್ತಿದ್ದು, ಈ ಮುಖಾಂತರ ಕಾರ್ಯಕರ್ತರಲ್ಲೂ ಹೊಸ ಹುರುಪು ತುಂಬುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಘಟಾನುಘಟಿ ನಾಯಕರೊಂದಿಗೆ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದ್ದಾರೆ.

ತುಮಕೂರು ಕಾಂಗ್ರೆಸ್ ಭದ್ರಕೋಟೆ. ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು ಎಂಬ ಕಾರಣದಿಂದ ಹೆಚ್ಚು ರಿಸ್ಕ್‌ ತೆಗೆದುಕೊಂಡು ಮುದ್ದಹನುಮೇಗೌಡರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿಸಿ ಕರೆತಂದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಸಚಿವಗಿರಿಗಳನ್ನು ಪಣಕ್ಕಿಟ್ಟು ಪ್ರಚಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ: ಈ ಬಾರಿ ಗೆಲುವು ಯಾರದ್ದು? - Lok Sabha elections 2024

ABOUT THE AUTHOR

...view details