ಕರ್ನಾಟಕ

karnataka

ಭರಚುಕ್ಕಿ, ಹೊಗೆನಕಲ್​​ ಪ್ರವಾಸಕ್ಕೆ ನಿಷೇಧ; ಕಾಳಜಿ ಕೇಂದ್ರದತ್ತ ಮುಖಮಾಡಿದ ಗ್ರಾಮಸ್ಥರು - Tourists Ban

By ETV Bharat Karnataka Team

Published : Jul 31, 2024, 1:33 PM IST

ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಈ ಭಾಗದ ಡ್ಯಾಂಗಳು ಬಹುತೇಕ ತುಂಬಿದ್ದು, ಭಾರೀ ಪ್ರಮಾಣದಲ್ಲಿ ಜಲಾಶಯದಿಂದ ನೀರು ಹೊರಕ್ಕೆ ಬೀಡಲಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮದಿಂದ ಭರಚುಕ್ಕಿ ಮತ್ತು ಹೊಗೆನಕಲ್​ಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

BHARACHUKKI HOGENAKAL FALLS  CHAMARAJANAGARA  TOURISTS BANNED TO FALLS VISIT
ಕಾಳಜಿ ಕೇಂದ್ರದತ್ತ ಮುಖಮಾಡಿದ ಗ್ರಾಮಸ್ಥರು (ETV Bharat)

ಚಾಮರಾಜನಗರ:ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಪಾತ್ರದಲ್ಲಿ ಬರುವ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರವಾಸಿ ತಾಣಗಳಿಗೆ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ.

ಮೈದುಂಬಿ ಹರಿಯುತ್ತಿರುವ ಜಲಪಾತ (ETV Bharat)

ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರವಾಸಿ ತಾಣಗಳಾದ ವೆಸ್ಲಿ ಸೇತುವೆ, ಶಿವನಸಮುದ್ರ, ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು, ಯಾವುದೇ ಅವಘಡಗಳು ಸಂಭವಿಸದಂತೆ ಆಗಸ್ಟ್ 2ರ ತನಕ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಕಾಳಜಿ ಕೇಂದ್ರಕ್ಕೆ ತೆರಳಿದ ಜನ (ETV Bharat)

ಕಾಳಜಿ ಕೇಂದ್ರಕ್ಕೆ ರವಾನೆ :2 ಲಕ್ಷ ಕ್ಯೂಸೆಕ್ ಹೊರಹರಿವು ಸಾಧ್ಯತೆ ಹಿನ್ನೆಲೆ ಮತ್ತೆ ನದಿ ಪಾತ್ರದ ಗ್ರಾಮಗಳು ಪ್ರವಾಹ ಭೀತಿಯಲ್ಲಿ ಸಿಲುಕಿವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್, ಕೆಆರ್​ಎಸ್ ಜಲಾಶಯದಿಂದ 1.10 ಲಕ್ಷ ಕ್ಯೂಸೆಕ್​ ನೀರನ್ನು ನದಿಗೆ ಬಿಡಲಾಗಿದೆ. ಹಾಗಾಗಿ ತಾಲ್ಲೂಕಿನ ದಾಸನಪುರ, ಮುಳ್ಳೂರು, ಹಳೆ ಹಂಪಾಪುರ, ಹಳೆ ಅಣ್ಣಗಳ್ಳಿ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯ ಸೇರಿ ಇತರೆ ಗ್ರಾಮಗಳು ಮತ್ತೆ ಪ್ರವಾಹದಲ್ಲಿ ಸಿಲುಕಿವೆ. ಹಾಗಾಗಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನದಿ ಪಾತ್ರದ ಗ್ರಾಮಗಳ ಜನರು ತಮ್ಮ ನಿವಾಸಿ ಸ್ಥಳಗಳನ್ನು ತೊರೆಯಬೇಕು ಎಂದು ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡುತ್ತಿದ್ದಾರೆ.

ಕಾಳಜಿ ಕೇಂದ್ರಕ್ಕೆ ತೆರಳುತ್ತಿರುವ ಗ್ರಾಮಸ್ಥರು (ETV Bharat)

ಗ್ರಾಮ ತೊರೆಯಲು ಜನರ ಹಿಂದೇಟು; ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದರೂ ಸಹ ಗ್ರಾಮದವರು ನಾವು ನಮ್ಮ ಸ್ಥಳಗಳನ್ನು ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ದಾಸನಪುರ ಗ್ರಾಮದ ಪ್ರತಿಯೊಂದು ಮನೆಮನೆಗೂ ಉಪವಿಭಾಧಿಕಾರಿ ಮಹೇಶ್ ನೇತೃತ್ವದ ತಂಡ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸುತ್ತಿದ್ದಾರೆ. ಈಗಾಗಲೇ 10 ಮನೆಯವರನ್ನು ಮನವೊಲಿಸಿ ಎರಡು ಕಾರುಗಳಲ್ಲಿ 25ಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಕರೆತರಲಾಗಿದೆ.

ಓದಿ:ಕೇರಳ ಭೂಕುಸಿತ ದುರಂತ: 7 ಮಂದಿ ಕನ್ನಡಿಗರು ಸಾವು - WAYANAD LANDSLIDES

ABOUT THE AUTHOR

...view details