ಕರ್ನಾಟಕ

karnataka

ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ 8 ಕಡೆ ವ್ಯವಸ್ಥೆ: ಬೀಳ್ಕೊಡಲು ಅದ್ಧೂರಿ ತಯಾರಿ, ಬಿಗಿ ಭದ್ರತೆ - Belagavi Ganesh Procession

By ETV Bharat Karnataka Team

Published : Sep 17, 2024, 4:17 PM IST

ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನಗರದಲ್ಲಿ 8 ಕಡೆ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನಗರದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಿದೆ.

ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ ಭದ್ರತೆ
ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ ಭದ್ರತೆ (ETV Bharat)

ಬೆಳಗಾವಿಯಲ್ಲಿ ಗಣೇಶ ನಿಮಜ್ಜನಕ್ಕೆ 8 ಕಡೆ ವ್ಯವಸ್ಥೆ: ಬೀಳ್ಕೊಡಲು ಅದ್ಧೂರಿ ತಯಾರಿ, ಬಿಗಿ ಭದ್ರತೆ (ETV Bharat)

ಬೆಳಗಾವಿ: ಕಳೆದ 11 ದಿನಗಳಿಂದ ಬೆಳಗಾವಿಯಲ್ಲಿ ಸಾರ್ವಜನಿಕ ಮಂಡಳಿಗಳು ಹಾಗೂ ಮನೆಗಳಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ ಭಕ್ತರು, ಇಂದು ಅಂತಿಮ‌ ವಿದಾಯ ಹೇಳಲು ಸಜ್ಜಾಗಿದ್ದಾರೆ. ನಗರದಲ್ಲಿ 390ಕ್ಕೂ ಅಧಿಕ ಸಾರ್ವಜನಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಗಾವಿ ಅಷ್ಟೇ ಅಲ್ಲದೇ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಗಣೇಶನ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿತ್ತು. 11 ದಿನಗಳ ಭಕ್ತಿಯಿಂದ ಧಾರ್ಮಿಕ ವಿಧಿ ಕೈಗೊಂಡ ಭಕ್ತರು, ಇಂದು ಮಂಗಳವಾರ ಮೋದಕ ಪ್ರಿಯನಿಗೆ ಬೀಳ್ಕೊಡಲಿದ್ದಾರೆ.

ಭವ್ಯ ಮೆರವಣಿಗೆ:ಬೆಳಗಾವಿಯ ಹುತಾತ್ಮ ಚೌಕ್‌ನಲ್ಲಿ ಸಂಜೆ 5ಕ್ಕೆ ಆರಂಭಗೊಳ್ಳುವ ಸಾರ್ವಜನಿಕ ಮೂರ್ತಿಗಳ ಭವ್ಯ ಮೆರವಣಿಗೆ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್‌ ರಸ್ತೆ, ರಾಮಲಿಂಗಖಿಂಡ್‌ ಗಲ್ಲಿ ರಸ್ತೆ, ಟಿಳಕ ಚೌಕ್, ಹೆಮು ಕಲಾನಿ ಚೌಕ್‌, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡಕ್ಕೆ ಬಂದು ತಲುಪಲಿದೆ. ಮೆರವಣಿಗೆ ಉದ್ದಕ್ಕೂ ರೂಪಕಗಳು, ವಿವಿಧ ಕಲಾತಂಡಗಳು ಕಣ್ಮನ ಸೆಳೆಯಲಿವೆ.

8 ಕಡೆ ನಿಮಜ್ಜನಕ್ಕೆ ವ್ಯವಸ್ಥೆ:ಬೆಳಗಾವಿ ನಗರದ ಶಹಾಪುರದ ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ, ಹಳೆಯ ಹೊಂಡ, ಜಕ್ಕೇರಿ ಹೊಂಡ, ಕೋಟೆ ಕೆರೆ, ಕಣಬರ್ಗಿ ಕೆರೆ, ಅನಗೋಳದ ಲಾಲ್‌ ತಾಲಾಬ್‌, ಮಜಗಾವಿ ಕೆರೆ, ವಡಗಾವಿಯ ನಾಜರ್‌ಕ್ಯಾಂಪ್‌ ಸೇರಿ 8 ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ನೀರಲ್ಲಿ ಬೃಹದಾಕಾರದ ಮೂರ್ತಿಗಳನ್ನು ಮುಳುಗಿಸಲು ಕ್ರೇನ್‌ ಬಳಸಲಾಗುತ್ತಿದೆ. ಅಲ್ಲದೇ ಈಜುಪಟುಗಳನ್ನು ಕೂಡ ನಿಯೋಜಿಸಿದ್ದೇವೆ. ಧರ್ಮವೀರ ಸಂಭಾಜಿ ವೃತ್ತದ ಬಳಿ ವೀಕ್ಷಕರ ಗ್ಯಾಲರಿಯನ್ನೂ ನಿರ್ಮಿಸಲಾಗಿದೆ. ಯಾವುದೇ ರೀತಿ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆ ಕೈಗೊಂಡಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ತಿಳಿಸಿದರು.

ಖಾಕಿ ಸಜ್ಜು:ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ಪೊಲೀಸರು ಸಜ್ಜಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ- ಧಾರವಾಡ ಸೇರಿ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಪೊಲೀಸರು ಆಗಮಿಸಿದ್ದಾರೆ. ಎಸ್‌ಪಿ ಶ್ರೇಣಿಯ 7 ಅಧಿಕಾರಿಗಳು, 31 ಡಿವೈಎಸ್‌ಪಿ, 110 ಇನ್‌ಸ್ಪೆಕ್ಟರ್‌, 130 ಸಬ್‌ ಇನ್‌ಸ್ಪೆಕ್ಟರ್‌, 3,200 ಪೊಲೀಸರು, 580 ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ ತುಕಡಿ, 8 ಸಿಎಆರ್‌ ತುಕಡಿಗಳಿದ್ದು, ನಗರದ ಆಯಕಟ್ಟಿನ ಸ್ಥಳಗಳಲ್ಲಿ 570 ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ಕಳೆದ ವರ್ಷ ಗಣೇಶ ಮೂರ್ತಿಗಳ ನಿಮಜ್ಜನ ಸತತ 30 ಗಂಟೆ ನಡೆದಿತ್ತು. ಸೆ.28ರ ಸಂಜೆ 5ಕ್ಕೆ ಆರಂಭಗೊಂಡು, 29ರ ರಾತ್ರಿ ಮೆರವಣಿಗೆ ಮುಗಿದಿತ್ತು. ಈ ಬಾರಿಯೂ ಮಂಗಳವಾರ ಸಂಜೆ ಆರಂಭವಾಗುವ ಮೆರವಣಿಗೆ, ಬುಧವಾರ ರಾತ್ರಿವರೆಗೂ ನಡೆಯುವ ಸಾಧ್ಯತೆ ಇದೆ.

ರಾರಾಜಿಸುತ್ತಿರುವ ಕಟೌಟ್:ಮೆರವಣಿಗೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಸೇರುವ ಧರ್ಮವೀರ ಸಂಭಾಜಿ ವೃತ್ತದಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳ ಕಟೌಟ್​ಗಳು ರಾರಾಜಿಸುತ್ತಿವೆ.

ಇದನ್ನೂ ಓದಿ: ಶಿವಮೊಗ್ಗ ಹಿಂದೂ ಮಹಾಸಭಾ ಗಣಪನ ನಿಮಜ್ಜನ ಮೆರವಣಿಗೆ: ಗಣೇಶನಿಗೆ ಸಿದ್ಧವಾದ ನೋಟಿನ ಹಾರ - Hindu Mahasabha Ganesh

ABOUT THE AUTHOR

...view details