ಕರ್ನಾಟಕ

karnataka

ETV Bharat / state

ಶ್ರೀರಾಮನ ವನವಾಸಕ್ಕೂ ದಾವಣಗೆರೆಗೂ ಇದೆ ನಂಟು; ಸೀತೆಯ ದಾಹ ನೀಗಿಸಲು ಬಾಣದಿಂದ ಗಂಗೆ ಹರಿಸಿದ್ದ ಶ್ರೀರಾಮ

ಶ್ರೀರಾಮ ಹಾಗೂ ಸೀತಾಮಾತೆ ತಮ್ಮ ವನವಾಸದ ವೇಳೆ ತೀರ್ಥರಾಮೇಶ್ವರದಲ್ಲಿ ತಂಗಿದ್ದರು ಎಂಬುದು ಪುರಾಣದಿಂದ ತಿಳಿದುಬಂದಿದೆ.

By ETV Bharat Karnataka Team

Published : Jan 21, 2024, 5:37 PM IST

Updated : Jan 21, 2024, 7:46 PM IST

ದಾವಣಗೆರೆ
ದಾವಣಗೆರೆ

ಅರ್ಚಕ ರಘು ಅವರು ಮಾತನಾಡಿದ್ದಾರೆ

ದಾವಣಗೆರೆ :ಎಲ್ಲಿ ನೋಡಿದ್ರು ಸದ್ಯ ಪ್ರಭು ಶ್ರೀರಾಮನದ್ದೇ ಚರ್ಚೆ. ಕಾರಣ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ. ಸೋಮವಾರ (ಜನವರಿ 22) ಕ್ಕೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದ್ದು, ಇದಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

ದಾವಣಗೆರೆ ಜಿಲ್ಲೆಯ ನಂಟು; ಶ್ರೀ ರಾಮಚಂದ್ರನ ವನವಾಸಕ್ಕೂ ದಾವಣಗೆರೆಗೂ ನಂಟಿದೆ‌. ಸೀತಾ ರಾಮ ವನವಾಸದ ವೇಳೆ ತೀರ್ಥರಾಮೇಶ್ವರದಲ್ಲಿ ತಂಗಿದ್ದರು ಎಂಬುದನ್ನು ಪುರಾಣದಲ್ಲಿ ಕಾಣಬಹುದಾಗಿದೆ. ಅಲ್ಲದೆ ಸೀತೆಯ ನೀರಿನ ದಾಹ ತಣಿಸಲು ಶ್ರೀ ರಾಮ ತೀರ್ಥರಾಮೇಶ್ವರದಲ್ಲಿ ತನ್ನ ಬಿಲ್ಲಿನಿಂದ ಗಂಗೆಯನ್ನು ಹರಿಸಿ ಸೀತಾ ಮಾತೆಯ ದಾಹ ನೀಗಿಸಿದ್ದ. ಅದಕ್ಕೆ ತೀರ್ಥರಾಮೇಶ್ವರ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವಿದೆ.

ಜಿಲ್ಲೆಯ ನ್ಯಾಮತಿ ತಾಲೂಕಿನ ತೀರ್ಥರಾಮೇಶ್ವರದಲ್ಲಿ ಮೊದಲಿನಿಂದ ಶ್ರೀ ರಾಮನ ವನವಾಸದ ಕಥೆ ಇದೆ. ಅಯೋಧ್ಯೆಯಿಂದ ವನವಾಸ ಆರಂಭಿಸಿದ್ದ ಶ್ರೀರಾಮ ಹಾಗೂ ಸೀತೆ ತೀರ್ಥರಾಮೇಶ್ವರದಲ್ಲಿ ತಂಗಿದ್ದರು ಎಂಬುದು ಪುರಾಣದಲ್ಲಿ ಉಲ್ಲೇಖವಿದೆ. ಶ್ರೀ ರಾಮ ಹಾಗೂ ಸೀತಾ ಮಾತೆ ಇಬ್ಬರು ವನವಾಸಕ್ಕೆಂದು ಸಂಚರಿಸುವ ವೇಳೆ ಈ ತೀರ್ಥರಾಮೇಶ್ವರದಲ್ಲಿ ತಂಗಿದ್ದರಂತೆ.

ನೀರಿನ ದಣಿವಾದಾಗ ಸೇವಿಸಲು ನೀರು ಬೇಕೆಂದು ಸೀತಾ ಮಾತೆ ಶ್ರೀರಾಮನಿಗೆ ಬೇಡಿಕೆ ಇಡುತ್ತಾರೆ. ಆಗ ಶೀರಾಮಚಂದ್ರನು ತನ್ನ ಬಿಲ್ಲಿನ ಮೂಲಕ ಅಂದು ನೀರು ಹರಿಸಿ ಸೀತಾ ಮಾತೆಯ ನೀರಿನ ದಾಹವನ್ನು ನೀಗಿಸಿದ್ದರಂತೆ. ಅಂದಿನಿಂದ ಇಂದಿನ ವರೆಗೂ ತೀರ್ಥರಾಮೇಶ್ವರದಲ್ಲಿ ಗಂಗೆ ಉದ್ಭವಿಸುತ್ತಿದ್ದು, ಎಂತಹದ್ದೇ ಬರಗಾಲ ಆವರಿಸಿದ್ರು ಕೂಡ ಈ ಜೀವಜಲ ಬತ್ತಿರುವ ಉದಾಹರಣೆ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಇತಿಹಾಸದ ಹಿನ್ನೆಲೆ: ''14 ವರ್ಷಗಳ ಕಾಲ ರಾಮ ಮತ್ತು ಸೀತೆ ವನವಾಸಕ್ಕೆ ತೀರ್ಥರಾಮೇಶ್ವರಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಆಗಮಿಸಿದಾಗ ಸೀತಾ ಮಾತೆಗೆ ಬಾಯಾರಿಕೆ ಆಗಿತ್ತು. ಆಗ ಕುಡಿಯಲು ನೀರು ಬೇಕೆಂದು ಶ್ರೀರಾಮನಿಗೆ ಕೇಳಿದ್ದಾರೆ. ಅದಕ್ಕೆ ಅವರು ಕಾಶಿಯಿಂದ ನೀರು ಬರುವಂತೆ ರಾಮ ತನ್ನ ಬಾಣವನ್ನು ಪ್ರಯೋಗವನ್ನು ಮಾಡಿ ತಂದ ಈ ತೀರ್ಥವನ್ನು ಸೀತೆ ಸೇವಿಸಿದ್ದರು. ಇನ್ನು ಪೂಜಿಸಲು ಲಿಂಗವನ್ನು ಉದ್ಭವ ಮಾಡಿಕೊಡಿ ಎಂದು ಸೀತೆ ಕೇಳಿಕೊಂಡಾಗ, ತನ್ನ ಬಾಣದಿಂದ ರಾಮ ಲಿಂಗವನ್ನು ಉದ್ಭವ ಮಾಡಿಕೊಟ್ಟಿದ್ದ. ಆ ಲಿಂಗದ ಆರಾಧನೆ ಮಾಡಿ ರಾಮ ಸೀತೆ ಮತ್ತೇ ವನವಾಸಕ್ಕೆ ತೆರಳಿದರು. ಇದೀಗ ಅದೇ ಲಿಂಗವನ್ನು ಇಂದಿಗೂ ಪೂಜಿಸಲಾಗುತ್ತಿದೆ. ಇಲ್ಲಿ ನಾನಾ ಹರಕೆಗಳು ಕೂಡ ಈಡೇರುತ್ತವೆ'' ಎಂದು ಅರ್ಚಕರಾದ ರಘು ಪುರಾಣದ ಕುರಿತು ತಿಳಿಸಿದರು.

ತೀರ್ಥವನ್ನು ಮೈಮೇಲೆ ಹಾಕಿಕೊಂಡರೆ ಪಾಪ ಪರಿಹಾರ ಎಂಬ ನಂಬಿಕೆ: ''ಶ್ರೀರಾಮ ಹರಿಸಿದ್ದ ಈ ತೀರ್ಥವನ್ನು ಭಕ್ತರು ಮೈಮೇಲೆ ಹಾಕಿಕೊಂಡರೆ ಪಾಪ ಪರಿಹಾರ ಆಗಲಿದೆ ಎಂಬ ನಂಬಿಕೆ ಇದೆ. ತೀರ್ಥದ ಕೊಳ ಪೂರ್ತಿ ತುಂಬಿ ಜೀವಜಲದ ಒಂದು ಹನಿ ಕೂಡ ಹೊರಬಂದು ಪೋಲಾಗುವುದಿಲ್ಲ. ಅದು ಏಕೆ ಬರುವುದಿಲ್ಲ, ಆ ನೀರು ಎಲ್ಲಿ ಬರುತ್ತದೆ ಎಂಬುದನ್ನು ಕಂಡುಹಿಡಿಯಲು ಸಹ ಆಗಿಲ್ಲ. ಕಷ್ಟ ಸುಖದಲ್ಲಿ ಸಮಸ್ಯೆ ಬಗೆಹರಿಸಬಹುದು. ಮಕ್ಕಳಾಗದವರು ಹರಕೆ ಹೊತ್ತು ಒಂದು ಕೊಡ ಜಲವನ್ನು ಮೈಮೇಲೆ ಹಾಕಿಕೊಂಡರೆ ಹರಕೆ ಪೂರ್ಣಗೊಳ್ಳಲಿದೆ. ಕರ್ನಾಟಕದಾದ್ಯಂತ ಭಕ್ತರು ಈ ಪುಣ್ಯ ಸ್ಥಳಕ್ಕಾಗಮಿಸುತ್ತಿದ್ದಾರೆ'' ಎಂದು ಬೆಳಗುತ್ತಿ ಗ್ರಾ ಪಂ ಸದಸ್ಯ ಸಿದ್ದೇಶಪ್ಪ ಅವರು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:20 ವರ್ಷದ ಹಿಂದೆ ಮನೆ ಹೆಬ್ಬಾಗಿಲಿನಲ್ಲಿ ಶ್ರೀರಾಮ ಮಂದಿರ ನಿರ್ಮಿಸಿ ನಿತ್ಯ ಪೂಜೆ.. ಭಕ್ತ ಮಹಾದೇವಪ್ಪನ ಕಾರ್ಯಕ್ಕೆ ಶ್ಲಾಘನೆ

Last Updated : Jan 21, 2024, 7:46 PM IST

ABOUT THE AUTHOR

...view details