ಕರ್ನಾಟಕ

karnataka

ETV Bharat / state

ಆನೆಗಳು ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿವೆ, ಅಭಿಮನ್ಯು ಇಸ್ ದ ಬೆಸ್ಟ್: ಡಿಸಿಎಫ್​ ಪ್ರಭುಗೌಡ

ಜಂಬೂಸವಾರಿಯಲ್ಲಿ ಕ್ಯಾಪ್ಟನ್​ ಅಭಿಮನ್ಯು, ಲಕ್ಷ್ಮೀ ಮತ್ತು ಹಿರಣ್ಯ ಸೇರಿದಂತೆ ಎಲ್ಲಾ ಆನೆಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ ಎಂದು ಡಿಸಿಎಫ್ ಪ್ರಭುಗೌಡ ಶ್ಲಾಘಿಸಿದರು.

By ETV Bharat Karnataka Team

Published : 4 hours ago

ಡಿಸಿಎಫ್​ ಪ್ರಭುಗೌಡ
ಡಿಸಿಎಫ್​ ಪ್ರಭುಗೌಡ (ETV Bharat)

ಮೈಸೂರು:ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆ ತುಂಬಾ ಚೆನ್ನಾಗಿ ನಡೆಯಿತು. ಕ್ಯಾಪ್ಟನ್​ ಅಭಿಮನ್ಯು, ಲಕ್ಷ್ಮೀ ಮತ್ತು ಹಿರಣ್ಯ ಸೇರಿದಂತೆ ಎಲ್ಲಾ ಆನೆಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ ಎಂದು ಡಿಸಿಎಫ್ ಪ್ರಭುಗೌಡ ಶ್ಲಾಘಿಸಿದರು.

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಹೊಸ ಆನೆಗಳು ಭಾಗವಹಿಸಿದ್ದವು. ಅವುಗಳನ್ನು ನಿಭಾಯಿಸುವ ಬಗ್ಗೆ ಸ್ವಲ್ಪ ಚಾಲೆಂಜಿಂಗ್​ ಆಗಿತ್ತು. ಆದರೆ ಕಾವಾಡಿಗರು ಮತ್ತು ಮಾವುತರು ಬಹಳ ಶ್ರಮಪಟ್ಟು ಆನೆಗಳನ್ನು ಪಳಗಿಸಿದ್ದಾರೆ. ನಮ್ಮ ಇಡೀ ಅರಣ್ಯ ಇಲಾಖೆ ತಂಡ ಜಂಬೂಸವಾರಿಗೆ ಶ್ರಮಪಟ್ಟು ಕೆಲಸ ಮಾಡಿದ್ದರಿಂದ ಮೈಸೂರು ದಸರಾ ಯಶಸ್ವಿಯಾಗಿದೆ ಎಂದರು.

ಡಿಸಿಎಫ್​ ಪ್ರಭುಗೌಡ (ETV Bharat)

14 ಆನೆಗಳು ಸ್ಪೆಷಲ್​, ಮೊದಲ ಬಾರಿಯ ಜವಾಬ್ದಾರಿ ಸಕ್ಸಸ್​; ನನಗೆ ಇದೇ ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಉಸ್ತುವಾರಿ ಜವಾಬ್ದಾರಿ ಬಂದಿದ್ದು, ತುಂಬಾ ಚಾಲೆಂಜಿಂಗ್​ ಆಗಿತ್ತು. ಆದರೆ ನನ್ನ ತಂಡ ಅವರವರ ಕೆಲಸಗಳನ್ನು ಸರಿಯಾಗಿ ನಿರ್ವಹಿಸಿದ್ದರಿಂದ ನನಗೆ ಯಾವುದು ತೊಂದರೆಯಾಗಲಿಲ್ಲ. ನಮ್ಮ ತಂಡದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಜಂಬೂಸವಾರಿಯಲ್ಲಿ ಭಾಗವಹಿಸಿದ 14 ಆನೆಗಳೂ ನನಗೆ ಸ್ಪೆಷಲ್. ಎಲ್ಲಾ ಮಾವುತರು ಮತ್ತು ಕಾವಾಡಿಗರು ತಮ್ಮ ಆನೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಹೇಳಿದರು.

ಕ್ಯಾ. ಅಭಿಮನ್ಯು ಹಾಡಿಹೊಗಳಿದ ಡಿಸಿಎಫ್​; ಅಭಿಮನ್ಯು ಇಸ್​ ದ ಬೆಸ್ಟ್, ಯಶಸ್ವಿಯಾಗಿ ಅಂಬಾರಿಯನ್ನು ಹೊತ್ತಿದ್ದಾನೆ. ಮುಂದಿನ ವರ್ಷದ ಅಂಬಾರಿ ಯಾವ ಆನೆ ಹೊರಬೇಕು ಎಂದು ಚರ್ಚೆ ಮಾಡೋಣ. ಆನೆಯನ್ನು ಆಯ್ಕೆ ಮಾಡುವ ಸಮಯದಲ್ಲಿ ಸಲಹೆ ಸೂಚನೆಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅಭಿಮನ್ಯು ಆನೆಗೆ ಬದಲಿಯಾಗಿ ಧನಂಜಯ ಮತ್ತು ಪ್ರಶಾಂತ ಆನೆಗಳನ್ನು ಇಟ್ಟುಕೊಂಡಿದ್ದೆವು. ಈ ಆನೆಗಳು ಕೂಡ ಯಶಸ್ವಿಯಾಗಿ ಜಂಬೂಸವಾರಿ ತಾಲೀಮು ಪೂರ್ಣಗೊಳಿಸಿದ್ದವು. ನಾಳೆ (ಸೋಮವಾರ) ಅರಮನೆಯಿಂದ ಶಿಬಿರಕ್ಕೆ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ. ನನಗೆ ಇದು ಒಂದು ಅದ್ಭುತ ಅನುಭವ ಎಂದು ಡಿಸಿಎಫ್​ ಪ್ರಭುಗೌಡ ಈ ಬಾರಿಯ ದಸರಾದ ಅನುಭವವನ್ನು ಎಳೆ ಎಳೆಯಾಗಿ ಹಂಚಿಕೊಂಡರು.

ನಾಡಿನ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ದಸರಾ ನಾಡಹಬ್ಬ ಅಂತಲೇ ಬಿಂಬಿತವಾಗಿದೆ. ಪಳಗಿದ ಆನೆಗಳು, ಮಾವುತರು, ಕಾವಾಡಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಇದಕ್ಕಾಗಿ ಹೆಚ್ಚು ಶ್ರಮಿಸುತ್ತಾರೆ. ಒಟ್ಟಾರೆ ಈ ಬಾರಿ ಯಾವುದೇ ಅಡತಡೆಗಳಿಲ್ಲದೆ ನಾಡಹಬ್ಬ ಯಶಸ್ವಿಯಾಗಿದ್ದು, ರಾಜ್ಯದ ಜನರು ಈ ವೈಭವವನ್ನು ಕಣ್ತುಂಬಿಕೊಂಡರು.

ಇದನ್ನೂ ಓದಿ:ಯಶಸ್ವಿಯಾಗಿ ಜಂಬೂಸವಾರಿ ಹೊತ್ತ AK47 ಖ್ಯಾತಿಯ ಅಭಿಮನ್ಯು; ಮಾವುತನ ವಿಶೇಷ ಸಂದರ್ಶನ

ABOUT THE AUTHOR

...view details