ಕರ್ನಾಟಕ

karnataka

ಮದುವೆಯಾಗದೇ ತಂದೆ-ತಾಯಿಯ ಪಾಲನೆ: ಬೆಳಗಾವಿ ರೈತ ಸಹೋದರಿಯರ ಸ್ವಾವಲಂಬಿ ಬದುಕು - National Sisters Day

By ETV Bharat Karnataka Team

Published : Aug 4, 2024, 2:33 PM IST

Updated : Aug 5, 2024, 12:44 PM IST

ತಂದೆ-ತಾಯಿ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಏನೂ ಕೊಟ್ಟರೂ ಅವರ ಋಣ ತೀರಿಸಲಾಗದು. ಅದೆಷ್ಟೋ ಗಂಡು ಮಕ್ಕಳು ಹೆತ್ತವರನ್ನೇ ಮನೆಯಿಂದ ಹೊರಹಾಕುವ ಕಾಲದಲ್ಲಿ, ಇಲ್ಲಿ ಇಬ್ಬರು ಸಹೋದರಿಯರು ಮದುವೆಯಾಗದೇ ತಂದೆ-ತಾಯಿಯ ಪಾಲನೆ, ಪೋಷಣೆ ಮಾಡುತ್ತಿದ್ದಾರೆ.

NO MARRIAGE  WORKING IN THE FIELDS  TAKING CARE OF PARENTS  BELAGAVI
ತಂದೆ-ತಾಯಿ ಪಾಲಿಗೆ ಹೆಣ್ಣು ಮಕ್ಕಳೇ ದೇವರು (ETV Bharat)

ಪೋಷಕರ ಪಾಲಿಗೆ ಇವರೇ‌ ದೇವರು (ETV Bharat)

ಬೆಳಗಾವಿ:ಇಲ್ಲಿರುವಅಕ್ಕ-ತಂಗಿ ಪುರುಷ ಪ್ರಧಾನ ಸಮಾಜಕ್ಕೆ ಸಡ್ಡು ಹೊಡೆದು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇದ್ದರೆ ಇಂಥ ಅಕ್ಕ-ತಂಗಿ ಇರಬೇಕು ಎನ್ನುವಂತೆ ಇಡೀ ಊರಿಗೆ ಮಾದರಿಯಾಗಿದ್ದಾರೆ. ಇವರು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಬಸವರಾಜ ಮತ್ತು ಶಕುಂತಲಾ ಮರಡಿ ದಂಪತಿಯ ಪುತ್ರಿಯರು. ಇವರ ಆರು ಜನ ಹೆಣ್ಣು ಮಕ್ಕಳ ಪೈಕಿ ಕೊನೆಯವರೇ ಸುಜಾತಾ ಮತ್ತು ರೂಪಾ. ನಾಲ್ಕು ಜನ ಹೆಣ್ಣುಮಕ್ಕಳ ಮದುವೆಯಾದ ಬಳಿಕ ಇವರು ಸಹ ಮದುವೆಯಾಗಿ ಗಂಡನ ಮನೆಗೆ ಹೋಗಿ, ಸುಖ ಸಂಸಾರ ಮಾಡಬಹುದಿತ್ತು. ಆದರೆ, ತಂದೆ-ತಾಯಿಯನ್ನು ನೋಡಿಕೊಳ್ಳುವವರು ಯಾರೆಂದು ಯೋಚಿಸಿ ಈ ಸಹೋದರಿಯರು ಮದುವೆಯನ್ನೇ ಆಗಿಲ್ಲ.

ತಮ್ಮ ಸ್ವಂತ ಮನೆಯ ಬಳಿ ನಿಂತಿರುವ ಸಹೋದರಿಯರು (ETV Bharat)

ಬಸವರಾಜ ಮತ್ತು ಶಕುಂತಲಾ ಅವರಿಗೆ ಗಂಡು ಮಕ್ಕಳಿಲ್ಲ ಎನ್ನುವ ಕೊರಗು ಒಂದಿಷ್ಟೂ ಕಾಡದಂತೆ ನೋಡಿಕೊಳ್ಳುತ್ತಿರುವ ಅಕ್ಕ-ತಂಗಿ, ಗಂಡುಮಕ್ಕಳಂತೆ ಶರ್ಟ್​, ಪ್ಯಾಂಟ್​ ಧರಿಸುತ್ತಾರೆ. ತಲೆಗೊಂದು ವಸ್ತ್ರ ಕಟ್ಟಿಕೊಂಡು ಕೃಷಿ ಕಾಯಕ ಮಾಡುತ್ತಾರೆ. ಉತ್ತುವುದು, ಬಿತ್ತುವುದು, ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ರೆಂಟೆ– ಕುಂಟೆ–ಗಳೆ ಹೊಡೆಯವುದು, ಕೊಯ್ಲು–ರಾಶಿ, ಮಾರುಕಟ್ಟೆಗೆ ಸಾಗಿಸುವುದು ಸೇರಿ ಎಲ್ಲಾ ಕೆಲಸಗಳನ್ನು ಈ ಸಹೋದರಿಯರೇ ಲೀಲಾಜಾಲವಾಗಿ ಮಾಡುತ್ತಾರೆ‌.

ಅಕ್ಕ-ತಂಗಿ ಭಲೇ ಜೋಡಿ! (ETV Bharat)

ಈ ಸಹೋದರಿಯರಿಗೆ ಒಂದೂವರೆ ಎಕರೆ ಸ್ವಂತ ಜಮೀನು ಇದ್ದು, ಅಕ್ಕ ಪಕ್ಕದವರ 18 ಎಕರೆ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಉಳುಮೆ ಮಾಡುತ್ತಾರೆ. ಕಬ್ಬು, ಭತ್ತ, ತರಕಾರಿ ಸೇರಿ ಇತರೆ ಬೆಳೆ ಬೆಳೆಯುತ್ತಾರೆ. ಪ್ರತಿವರ್ಷ ಏನಿಲ್ಲ ಅಂದರೂ ಎಲ್ಲಾ ಖರ್ಚು ತೆಗೆದು 4 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಎರಡು ಎಮ್ಮೆಗಳಿದ್ದು, ಹಾಲು ಮಾರಾಟ ಮಾಡಿ ಆರ್ಥಿಕ ಸಬಲತೆ ಸಾಧಿಸಿದ್ದಾರೆ. ತಮ್ಮ ಹೊಲದಲ್ಲಿ 21 ಲಕ್ಷ ರೂ. ವೆಚ್ಚ ಮಾಡಿ ಮನೆ ಕಟ್ಟಿಸಿ ತಂದೆ, ತಾಯಿ ಜೊತೆಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಹೋದರಿಯರು (ETV Bharat)

ಅಕ್ಕ-ತಂಗಿ ಜೋಡೆತ್ತು:ಸುಜಾತಾಗೆ 40 ವರ್ಷ, ರೂಪಾಗೆ 38 ವರ್ಷ. ಹುಟ್ಟಿದಾಗಿನಿಂದ ಇಬ್ಬರೂ ಒಬ್ಬರಿಗೊಬ್ಬರು ಒಂದು ದಿನ ಕೂಡ ಬಿಟ್ಟಿಲ್ಲ. ಹೊಲದ ಕೆಲಸ, ಊರು, ಸಂತೆಗೂ ಜೊತೆಯಾಗಿಯೇ ಹೋಗುತ್ತಾರೆ. ಸುಜಾತಾ 5ನೇ ತರಗತಿ, ರೂಪಾ 4ನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಆದರೆ, ಲೆಕ್ಕಪತ್ರದಲ್ಲಿ ರೂಪಾ ತುಂಬಾ ಜಾಣೆ. ಶಿಕ್ಷಣ ಇಲ್ಲದಿದ್ದರೂ ವ್ಯವಹಾರಜ್ಞಾನ ಇವರಲ್ಲಿ ಸಾಕಷ್ಟಿದೆ‌. ಸುಜಾತಾ 10 ವರ್ಷದವರಿದ್ದಾಗ ಸೈಕಲ್‌ ಮೇಲಿಂದು ಬಿದ್ದು ಎಡಗಣ್ಣು ಕಳೆದುಕೊಂಡಿದ್ದಾರೆ. ಒಂಟಿಗಣ್ಣಿನಿಂದಲೇ ಸಹೋದರಿ ರೂಪಾಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಜನರು ಈಗ "ಭಲೇ ಹೆಣ್ಣು ಹುಲಿಗಳು" ಎಂದು ಕೊಂಡಾಡುತ್ತಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಹೋದರಿಯರು (ETV Bharat)

ಈಟಿವಿ ಭಾರತ ಜೊತೆಗೆ ಮಾತನಾಡಿದ ಸುಜಾತಾ, ಎಲ್ಲಾ ತಂದೆ ತಾಯಿ ಗಂಡು ಮಕ್ಕಳೇ ಬೇಕು ಎನ್ನುತ್ತಾರೆ. ಆದರೆ, ಗಂಡು ಮಕ್ಕಳಿಗೇನು ಎರಡು ಕೊಂಬು ಇರುತ್ತಾ?, ಹೆಣ್ಣು ಮಕ್ಕಳು ಕೇವಲ ಅಡುಗೆ ಕೋಣೆಗೆ ಸೀಮಿತವಲ್ಲ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಹಾಗಾಗಿ, ನಾವಿಬ್ಬರೂ ಜೋಡೆತ್ತಿನಂತೆ, ರಾಮ-ಲಕ್ಷ್ಮಣರಂತೆ ಭೂಮಿಯಲ್ಲೇ ದುಡಿಯುತ್ತಿದ್ದೇವೆ. ಮಹಿಳೆಯರನ್ನು ನೋಡಿ ಪುರುಷರು ಕಲಿಯುವುದು ಸಾಕಷ್ಟಿದೆ ಎನ್ನುತ್ತಾರೆ.

ಏನೇ ಕೊಟ್ಟರೂ ತಂದೆ-ತಾಯಿ ಸಿಗಲ್ಲ: ಕೋಟಿ ರೂ. ಕೊಟ್ಟರೆ ನಮಗೆ ಬೇಕಾದ ವಸ್ತುವನ್ನು ನಾವು ಕೊಂಡುಕೊಳ್ಳಬಹುದು. ಆದರೆ, ತಂದೆ-ತಾಯಿ ಪ್ರೀತಿ ಸಿಗುತ್ತಾ? ಇದು ಅಂಗಡಿಯಲ್ಲಿ ಸಿಗುವಂತದ್ದಲ್ಲ. ಅಂತಹ ಪ್ರೀತಿ ಬಿಟ್ಟು ಬದುಕುತ್ತೇವೆ ಎಂದರೆ ನಮ್ಮಂತ ಮೂರ್ಖರು ಬೇರೆ ಯಾರೂ ಇಲ್ಲ. ಗಂಡು ಮಕ್ಕಳು ಇಲ್ಲ ಎಂಬ ಕೊರತೆ ಕಾಡದಂತೆ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದೇವೆ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬುದು ರೂಪಾ ಅಭಿಪ್ರಾಯ.

ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಹೋದರಿಯರು (ETV Bharat)

ತಂದೆ ಬಸವರಾಜ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ನಿವೃತ್ತಿ ಹೊಂದಿದ್ದಾರೆ. ಆದ್ದರಿಂದ ಮನೆ ಜವಾಬ್ದಾರಿಯನ್ನು ಅಕ್ಕ-ತಂಗಿಯೇ ಹೊತ್ತುಕೊಂಡಿದ್ದು, ತಮ್ಮ ನಾಲ್ವರು ಹಿರಿಯ ಅಕ್ಕಂದಿರನ್ನು ತವರಿಗೆ ಕರೆತರುವುದು, ಹಬ್ಬ–ಹರಿದಿನಗಳಲ್ಲಿ ಉಡುಗೊರೆ ನೀಡುವುದು, ಬಾಣಂತನ ಸೇರಿ ಎಲ್ಲವನ್ನೂ ಇವರೇ ನೋಡಿಕೊಳ್ಳುತ್ತಾರೆ. ಚಿಕ್ಕಂದಿನಿಂದ ಕೃಷಿಯನ್ನೇ ಮಾಡುತ್ತಿದ್ದಾರೆ. ಊರಿನ ಜನ ಹುಟ್ಟಿದರೆ ಇಂಥ ಹೆಣ್ಣು ಮಕ್ಕಳು ಹುಟ್ಟಬೇಕು ಅಂತಾರೆ. ಇದೆಲ್ಲಾ ಕೇಳಿ ನಮಗೆ ಖುಷಿಯಾಗುತ್ತದೆ. ವಯಸ್ಸಾದ ನಮ್ಮನ್ನು ಸಾಕಿ ಸಲಹುತ್ತಿರುವ ಇಬ್ಬರೂ ಹೆಣ್ಣು ಮಕ್ಕಳು ನಮಗೆ ಪರಮಾತ್ಮನಿಗಿಂತ ಹೆಚ್ಚು ಎಂದು ತಂದೆ ಬಸವರಾಜ ಅಭಿಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಇಂದು ಫ್ರೆಂಡ್‌ಶಿಪ್ ಡೇ! ಕುಚಿಕು ಗೆಳೆಯರಾದ ವಿಷ್ಣು-ಅಂಬಿ ಸ್ನೇಹ ಬಾಂಧವ್ಯದ ಸವಿ ನೆನಪು - Vishnu Ambi Friendship

Last Updated : Aug 5, 2024, 12:44 PM IST

ABOUT THE AUTHOR

...view details