ಕರ್ನಾಟಕ

karnataka

ETV Bharat / state

ಸಂತ ಸೇವಾಲಾಲ್ ಜಯಂತಿ: ಪವಾಡ ಪುರುಷನ ಹೋರಾಟಗಳು ಹೇಗಿದ್ದವು ? ಭಾಯಗಡ್ ಇತಿಹಾಸ ಬಲ್ಲಿರಾ! - SEVALAL MAHARAJ JAYANTI

ಪವಾಡ ಪುರುಷ, ಬಂಜಾರ ಸಮಾಜದ ಆರಾಧ್ಯ ದೈವ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಇಂದು. ಈ ಹಿನ್ನೆಲೆ ದಾವಣಗೆರೆಯಲ್ಲಿ ನಿನ್ನೆ ಬೃಹತ್​ ಕಾರ್ಯಕ್ರಮವೂ ನಡೆದಿದೆ.

SANTA SEVALAL MAHARAJ JAYANTI 2025 DAVANAGERE  ಸಂತ ಸೇವಾಲಾಲ್ ಜಯಂತಿ  BANJARA COMMUNITY  ಭಾಯಗಡ್
ಸಂತ ಸೇವಾಲಾಲ್ ಜಯಂತಿ: ಪವಾಡ ಪುರುಷನ ಹೋರಾಟಗಳು ಹೇಗಿತ್ತು? ಭಾಯಗಡ್ ಇತಿಹಾಸ ಬಲ್ಲಿರಾ! (ETV Bharat)

By ETV Bharat Karnataka Team

Published : Feb 15, 2025, 7:28 AM IST

ದಾವಣಗೆರೆ:ಸಂತ ಸೇವಾಲಾಲ್ ಮಹಾರಾಜರು, ಬಂಜಾರ ಸಮುದಾಯದ ಆರಾಧ್ಯ ದೈವ ಕೂಡ ಹೌದು, ಅವರು ಸಮಾಜದ ಪ್ರಗತಿಯಲ್ಲಿ ಧರ್ಮದ ಪಾತ್ರವನ್ನು ಒತ್ತಿ ಹೇಳಿದವರು. ತಮ್ಮ ಪವಾಡ, ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜನ ಮನದಲ್ಲಿ ಗುರುವಿನ ಸ್ಥಾನ ಪಡೆದವರು. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿ ಮಾತು ಹೇಳಿದ್ದರು.

ಇತಂಹ ಮಹಾನ್ ಸಂತನ ಜಯಂತಿ ಇಂದು. ಈ ಹಿನ್ನೆಲೆಯಲ್ಲಿ ಸೇವಾಲಾಲ್ ಅವರ ಪವಿತ್ರ ಕ್ಷೇತ್ರದಲ್ಲಿ ನಿನ್ನೆ ಸಂಭ್ರಮ ಸಡಗರ ಮನೆ ಮಾಡಿತ್ತು. ಬಂಜಾರ ಸಮುದಾಯದ ಬಾಂಧವರು ಮಾಲೆ ಧರಿಸಿ ಪವಿತ್ರ ಸ್ಥಳ ಭಯಾಗಡ್ ಕಡೆ ಹೆಜ್ಜೆ ಹಾಕಿದರು. ಅಲ್ಲದೆ ಸಂತ ಸೇವಾಲಾಲ್ ಅವರ ಜನ್ಮಸ್ಥಳದಲ್ಲಿ ಎಲ್ಲಿ ನೋಡಿದರಲ್ಲಿ ಮಾಲಾಧಾರಿಗಳೇ ಕಾಣಸಿಗುತ್ತಿದ್ದರು. ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾಗಿದ್ದ ಸಂತ ಸೇವಾಲಾಲ್​ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು.

ದಾವಣಗೆರೆ ಜಿಲ್ಲಾಡಳಿತ ಬೃಹತ್ ಸಂತ ಸೇವಾಲಾಲ್​ರ ಜಯಂತೋತ್ಸವ ಕಾರ್ಯಕ್ರಮ (ETV Bharat)

ಜನರ ಅಂಧಕಾರ ಹೋಗಲಾಡಿಸಿದವರು:ಸಂತ ಸೇವಾಲಾಲ್ ಮಹಾರಾಜರು ಭೀಮ ನಾಯಕ್, ಧರ್ಮಿಣಿ ಯಾಡಿಯವರ ಪುತ್ರನಾಗಿ 15 ಫೆಬ್ರವರಿ 1739ರಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನ ಕೊಪ್ಪದಲ್ಲಿ ಜನ್ಮ ತಾಳಿದರು. ಸಂತ ಸೇವಾಲಾಲ್​ರ ಜನ್ಮವಾದ ನಂತರ ಸೂರಗೊಂಡನ ಕೊಪ್ಪವನ್ನು ಭಾಯ್​ಗಢ ಎಂದು ನಾಮಕರಣ ಮಾಡಲಾಯಿತು.

ಸಂತ ಸೇವಾಲಾಲ್ ಜಯಂತಿ (ETV Bharat)

ಪವಾಡಗಳನ್ನು ಮಾಡುವ ಮುಖೇನಾ ಸೇವಾಲಾಲ್ ಜನರ ಮನಸ್ಸುಗಳಲ್ಲಿ ಮನೆ ಮಾಡಿದರು. ಹದಿನೆಂಟನೇ ಶತಮಾನದಲ್ಲಿ ಲಂಬಾಣಿ ಸಮಾಜದ ಜನರ ಹಕ್ಕಿಗಾಗಿ ಹೋರಾಟವನ್ನು ಮೈಗೂಡಿಸಿಕೊಂಡಿದ್ದರು.‌ ಅಂದಿನ ಹೈದರಾಬಾದ್​ನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟ ಮಾಡಿದರು. ಲಂಬಾಣಿ ಸಮುದಾಯ ಜನ ಸಾವಿರಾರು ವರ್ಷಗಳಿಂದ ಅರಣ್ಯ ವಾಸಿಗಳಾಗಿ ಜೀವನ ಸಾಗಿಸುತ್ತಿದ್ದರು. ಅವರನ್ನು ಮುಖ್ಯವಾಹಿನಿಗೆ ತರಲು ಅಜ್ಞಾನ ಅಂಧಕಾರಗಳನ್ನು ದೂರ ಮಾಡಿ ಜ್ಞಾನದ ಮಾರ್ಗ ತೋರಿದ ಕೀರ್ತಿ ಸೇವಾಲಾಲರಿಗೆ ಸಲ್ಲುತ್ತದೆ. ಅಲ್ಲದೆ ಇವರಿಗೆ ಮೋತಿವಾಳು ಸಮುದಾಯದ ಜನ ಕರೆಯುತ್ತಿದ್ದರು.

ಪವಾಡ ಪುರುಷ, ಬಂಜಾರ ಸಮಾಜದ ಆರಾಧ್ಯ ದೈವ ಸಂತ ಸೇವಾಲಾಲ್ ಮಹಾರಾಜರ ಜಯಂತಿ (ETV Bharat)

ಪೋರ್ಚುಗೀಸರಿಂದ ಮುತ್ತಿನ ಹಾರ ಕಾಣಿಕೆ:ಪೋರ್ಚುಗೀಸರಿಂದ ಮುತ್ತಿನ ಹಾರ ಕಾಣಿಕೆಯಾಗಿ ಪಡೆದಿದ್ದರು, ಆದ್ದರಿಂದ ಇವರಿಗೆ ಮೋತಿವಾಳೋ ಎಂಬ ಹೆಸರು ಬಂತು. ಮುಂಬೈಯನ 'ಸ್ಮಿತ್ ಭಾವುಚಾ' ಪ್ರದೇಶದಲ್ಲಿ ಪೋರ್ಚುಗೀಸರ ಹಡಗು ಪೇಚಿಗೆ ಸಿಲುಕಿತ್ತು. ಆ ಹಡನ್ನು ಚಾಣಾಕ್ಷತನದಿಂದ ದಡ ಸೇರಿಸಿದ್ದರು. ಈ ಹಿನ್ನೆಲೆಯಲ್ಲಿ ಸೇವಾಲಾಲ್ ಮಹಾರಾಜರಿಗೆ ಪೋರ್ಚುಗೀಸರು ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು.

ಸೇವಾಲಾಲ್​ರ ಜಯಂತೋತ್ಸವದಲ್ಲಿ ಲಂಬಾಣಿ ನೃತ್ಯ (ETV Bharat)

ದೈವೀ ಶಕ್ತಿಗೆ ತಲೆಬಾಗಿದ್ದ ಹೈದರಾಬಾದ್​ನ ನಿಜಾಮ:ಸೇವಾಲಾಲ ಮಹಾರಾಜರ ದೈವೀ ಶಕ್ತಿಗೆ ಹೈದರಾಬಾದಿನ ನಿಜಾಮ ತಲೆ ಬಾಗಿದ್ದನ್ನು. ಅಲ್ಲದೇ ಅವರನ್ನು ಕರೆದು ಕಪ್ಪ ಕಾಣಿಕೆ ನೀಡಿದರು ಎಂಬ ಇತಿಹಾಸ ಇದೆ. ಹೈದರಾಬಾದಿನ ಕೇಂದ್ರ ಸ್ಥಾನದಲ್ಲಿ ಅವರ ತಂಡ ನೆಲೆಯೂರಲು ಒಂದಿಷ್ಟು ಜಾಗವನ್ನು ಅರ್ಪಿಸುತ್ತಾನೆ. ಆ ಪ್ರದೇಶವನ್ನು ಈಗಲೂ ಬಂಜಾರಾ ಹಿಲ್ಸ್ ಎಂದು ಕರೆಯುತ್ತಾರೆ. ಇದು ಪ್ರಸಿದ್ದಿ ಪಡೆದ ಪ್ರೇಕ್ಷಣೀಯ ಸ್ಥಳ ಕೂಡ ಆಗಿದೆ ಎಂದು ಇತಿಹಾಸ ಸಾರುತ್ತದೆ.

ಸಂತ ಸೇವಾಲಾಲ್​ರ ದೇವಾಲಯದಲ್ಲಿ ಭಕ್ತರ ದಂಡು (ETV Bharat)

ಮಹಾರಾಷ್ಟ್ರದಲ್ಲಿ ಸೇವಾಲಾಲ್ ಐಕ್ಯ:ಸೇವಾಲಾಲ್​ ಮಹಾರಾಜರು 1806ರ ಡಿಸೆಂಬರ್ 4ರಂದು ನಿಧನರಾದರು ಎಂದು ಹೇಳಲಾಗುತ್ತದೆ. ರುಹಿಗಢ್ (ಯವತ್ಮಾಲ್ ಜಿಲ್ಲೆ) ನಲ್ಲಿ ನಿಧನರಾದರು ಮತ್ತು ಈಗ ಮಹಾರಾಷ್ಟ್ರ ರಾಜ್ಯದಲ್ಲಿರುವ ವಾಶಿಮ್ ಜಿಲ್ಲೆಯ ಪೊಹರಗಢದಲ್ಲಿ ಸಮಾಧಿ ಮಾಡಲಾಗಿದೆ, ಜಗದಂಬಾ ದೇವಿಗೆ ಸಮರ್ಪಿತವಾದ ದೇವಾಲಯದ ಪಕ್ಕದಲ್ಲಿ ಅವರ ಸಮಾಧಿ ಇನ್ನೂ ನಿಂತಿದೆ.

ಸಂತರ ದರ್ಶನ ಪಡೆದು ಪುನೀತರಾದ ಭಕ್ತರು (ETV Bharat)

ಭಾಯಗಡ್​ನಲ್ಲಿ ಜಯಂತಿ ಸಂಭ್ರಮ ಸಡಗರ:ಇಂದು ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ. ಈ ಹಿನ್ನೆಲೆಯಲ್ಲಿ ನಿನ್ನೆಯೇ ಅವರ ಸಮುದಾಯದ ಜನ ಮಾಲೆ ಧರಿಸಿ ಭಯಾಗಡ್ ಕಡೆ ಹೆಜ್ಜೆ ಹಾಕಿದರು.‌ ದಾವಣಗೆರೆ ಜಿಲ್ಲಾಡಳಿತ ಬೃಹತ್ ಕಾರ್ಯಕ್ರಮ ಮಾಡಿ ಸಂತ ಸೇವಾಲಾಲ್​ರ ಜಯಂತೋತ್ಸವ ಮಾಡಿದರು. ಸಮಾಜ ಕಲ್ಯಾಣ ಸಚಿವ ಹೆಚ್​ಸಿ ಮಹಾದೇವಪ್ಪ, ಸತೀಶ್ ಜಾರಕಿಹೋಳಿ ಅವರು ಡಂಗುರ ಬಾರಿಸಿ, ದೀಪ ಬೆಳಗಿಸಿ ಜಯಂತಿಗೆ ಚಾಲನೆ ನೀಡಿದರು.

ಬಂಜಾರ ಸಮುದಾಯದ ಪೋರಿಯರು ಲಂಬಾಣಿ ಉಡುಗೆ ತೊಟ್ಟು ಸಂಗೀತಕ್ಕೆ ಸಖತ್ ಹೆಜ್ಜೆ ಹಾಕಿದರು. ಸಂತ ಸೇವಾಲಾಲ್​ರ ದೇವಾಲಯದಲ್ಲಿ ಮೂರ್ತಿಗೆ ಸುಂದರವಾಗಿ ಅಲಂಕಾರ ಮಾಡಿದ್ದರು. ಪಾದಯಾತ್ರೆ ಮಾಡಿದ ಜನ ದೇವಾಲಯಕ್ಕೆ ಭೇಟಿ ನೀಡಿ ಸಂತರ ದರ್ಶನ ಪಡೆದು ಪುನೀತರಾದರು.

ಇದನ್ನೂ ಓದಿ:ಹರಿಹರೇಶ್ವರ ಸ್ವಾಮಿಯ ಅದ್ಧೂರಿ ಬ್ರಹ್ಮರಥೋತ್ಸವ : ಐತಿಹಾಸಿಕ ತೇರಿಗಿದೆ 1,600 ವರ್ಷಗಳ ಇತಿಹಾಸ

ABOUT THE AUTHOR

...view details