ಕರ್ನಾಟಕ

karnataka

ETV Bharat / state

ಪಿಸ್ತೂಲ್​ನಿಂದ ಬೆದರಿಸಿ ಚಿನ್ನದಂಗಡಿ ದೋಚಲು ಯತ್ನ: ಮಧ್ಯಪ್ರದೇಶದಲ್ಲಿ ಅಡಗಿದ್ದ ಆರೋಪಿಗಳ ಬಂಧನ

ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಚಿನ್ನದಂಗಡಿ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೆರೆ ಹಿಡಿದಿದ್ದಾರೆ.

By ETV Bharat Karnataka Team

Published : Mar 20, 2024, 10:17 AM IST

Robbery attempted Case  Kodigehalli gold shop  gold shop robbery
ಮಧ್ಯಪ್ರದೇಶದಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಬೆಂಗಳೂರು:ಚಿನ್ನದಂಗಡಿಯಲ್ಲಿ ಪಿಸ್ತೂಲ್​ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬಂಧಿಸುವಲ್ಲಿ ಕೊಡಿಗೆಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಖಾನಾ ಶರ್ಮಾ (23), ಅಶು ಶರ್ಮಾ (27), ಪ್ರದೀಪ್ ಶರ್ಮಾ (37) ಹಾಗು ವಿಕಾಸ್ ಪಂಡಿತ್ (32) ಬಂಧಿತರು. ಸೂರಜ್ (30) ಎಂಬಾತ ಸಾವನ್ನಪ್ಪಿದ್ದಾನೆ.

ಪ್ರಕರಣದ ವಿವರ: ಮಾರ್ಚ್ 14ರಂದು ಹಾಡಹಗಲೇ ಕೊಡಿಗೆಹಳ್ಳಿಯ ದೇವಿನಗರದ ಲಕ್ಷ್ಮಿ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲ್ಲರ್ಸ್ ಶಾಪ್​ಗೆ ಬಂದಿದ್ದ ಆರೋಪಿಗಳು ಮಾಲಿಕ ಮತ್ತು ಅಂಗಡಿ ಸಿಬ್ಬಂದಿಯನ್ನು ಬೆದರಿಸಿ ಚಿನ್ನ ಕದಿಯಲು ಯತ್ನಿಸಿದ್ದರು. ಆದರೆ ಮಾಲಿಕ ಮತ್ತು ಸಿಬ್ಬಂದಿಯ ಪ್ರತಿರೋಧದಿಂದ ಚಿನ್ನಾಭರಣ ಕದಿಯಲು ಸಾಧ್ಯವಾಗದಿದ್ದಾಗ ಪಿಸ್ತೂಲ್​ನಿಂದ ಗುಂಡು ಹಾರಿಸಿ, ಪಿಸ್ತೂಲ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು, ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳಚ್ಚು ಮಾದರಿ ಆಧರಿಸಿ ತನಿಖೆ ಆರಂಭಿಸಿದಾಗ ಆರೋಪಿಗಳು ಮಧ್ಯಪ್ರದೇಶ ಮೂಲದವರು ಹಾಗೂ ಈ ಹಿಂದೆ ಮಧ್ಯಪ್ರದೇಶದಲ್ಲೂ ಕೂಡ ಹತ್ತಾರು ಬಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಾಡು ಹಿಡಿದು ಹೊರಟ ಪೊಲೀಸರಿಗೆ ಗ್ವಾಲಿಯರ್​ನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರು.

ಆರೋಪಿಗಳ ಪೈಕಿ ವಿಕಾಸ್ ಎಂಬಾತ ಈ ಹಿಂದೆಯೇ ಬೆಂಗಳೂರಿಗೆ ಬಂದು ಟೈಲ್ಸ್ ವರ್ಕ್ಸ್ ಸೇರಿಕೊಂಡಿದ್ದ. ಅದೇ ಸಂದರ್ಭದಲ್ಲಿ ಕೊಡಿಗೆಹಳ್ಳಿಯ ಚಿನ್ನಾಭರಣಗಳ ಅಂಗಡಿಯನ್ನು ಗುರುತಿಸಿಕೊಂಡಿದ್ದ. ನಂತರ ಕೆಲಸ ಬಿಟ್ಟು ತನ್ನ ಇಡೀ ತಂಡವನ್ನು ಬೆಂಗಳೂರಿಗೆ ಕರೆ ತಂದಿದ್ದ. ಆರೋಪಿಗಳು ಪ್ಲ್ಯಾನ್ ಮಾಡಿ ಅಂಗಡಿಯಲ್ಲಿ ದರೋಡೆಗೆ ಯತ್ನಿಸಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳಲ್ಲಿ ಓರ್ವನಾದ ಆಶು ಪಂಡಿತ್ ಹಾರಿಸಿದ ಗುಂಡು ಸೂರಜ್​ನ ಕುತ್ತಿಗೆ ಸೀಳಿತ್ತು. ಬಳಿಕ ಆತನ ಕುತ್ತಿಗೆಗೆ ಮಫ್ಲರ್ ಸುತ್ತಿಕೊಂಡು, ಕಂಟ್ರಿ ಮೇಡ್ ಪಿಸ್ತೂಲ್​ ಅನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಕಾಲ್ಕಿತ್ತಿದ್ದರು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ.

ಕೃತ್ಯದ ಸ್ಥಳದಿಂದ ಕಾಲ್ಕಿತ್ತ ಬಳಿಕ ರೈಲು ಮಾರ್ಗದ ಮೂಲಕ ಆರೋಪಿಗಳು ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದರು. ಗಾಯಾಳು ಸೂರಜ್​ನನ್ನು ಗ್ವಾಲಿಯರ್​ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತ ನಾಲ್ವರನ್ನು 13 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:₹25 ಕೋಟಿ ಮೊತ್ತದ ಮದ್ಯ, ಉಡುಗೊರೆ, ನಗದು ಜಪ್ತಿ

ABOUT THE AUTHOR

...view details