ಕರ್ನಾಟಕ

karnataka

ETV Bharat / state

ಕೇಂದ್ರವನ್ನು ದೂರುವ ಮೊದಲು ರಾಜ್ಯದಲ್ಲಿನ ತಾರತಮ್ಯ ಸರಿಪಡಿಸಿ : ಆರ್ ಅಶೋಕ್

ವಿಪಕ್ಷ ನಾಯಕ ಆರ್. ಅಶೋಕ್ ಅವರು ಅನುದಾನದ ಕುರಿತು ಮಾತನಾಡಿದ್ದಾರೆ. ರಾಜ್ಯದ ಕಾಂಗ್ರೆಸ್​ ಸರ್ಕಾರವು ಬಿಜೆಪಿ, ಕಾಂಗ್ರೆಸ್​ ಶಾಸಕರಿಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನ ಹೇಳಲಿ ಎಂದಿದ್ದಾರೆ.

By ETV Bharat Karnataka Team

Published : 5 hours ago

BJP
ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗ (ETV Bharat)

ಬೆಂಗಳೂರು :ರಾಜ್ಯದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಶಾಸಕರಿಗೆ ಎಷ್ಟು ಅನುದಾನ ನೀಡಿದೆ? ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದ್ದಾರೆ.

ಇಂದು ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕಡಿಮೆ ಅನುದಾನ ಕುರಿತಂತೆ ಮಾತನಾಡುವ ಕಾಂಗ್ರೆಸ್ ಮುಖಂಡರು ತಮ್ಮ ಮನೆಯಲ್ಲಿ ಸತ್ತುಬಿದ್ದ ಹೆಗ್ಗಣವನ್ನು ಮೊದಲು ಆಚೆ ಬಿಸಾಡಲಿ. ಆಮೇಲೆ ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣವನ್ನು ಎತ್ತಿ ಆಚೆ ಹಾಕಬಹುದು ಎಂದರು. ತಾರತಮ್ಯ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿ. ಆಗ ಕೇಂದ್ರಕ್ಕೆ ನಾವು ನಿಯೋಗದಲ್ಲಿ ನಿಮ್ಮ ಜೊತೆ ಬರಲು ಸಿದ್ಧ ಎಂದು ತಿಳಿಸಿದರು.

ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗ (ETV Bharat)

ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ, ಕಲ್ಲೆಸೆದ ದೇಶದ್ರೋಹಿಗಳನ್ನು ಬೆಂಬಲಿಸುವ ಹಾಗೂ ಅವರ ಮೊಕದ್ದಮೆ ರದ್ದುಪಡಿಸುವ ಸರ್ಕಾರದ ನಿರ್ಧಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಅವರು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಚರ್ಚೆ ಮಾಡಿದ್ದು, ಹುಬ್ಬಳ್ಳಿಯಲ್ಲಿ ಶೀಘ್ರವೇ ದೊಡ್ಡ ಹೋರಾಟ ಮಾಡಲಿದ್ದೇವೆ. ಕೇಸು ರದ್ದತಿ ಸರಿಯಲ್ಲ ಎಂಬ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ (ETV Bharat)

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಈ ಸರ್ಕಾರ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದಾಗಿ ವಿವರಿಸಿದರು. ದೇಶದ್ರೋಹಿಗಳ ವಿರುದ್ಧ ನಮ್ಮ ಸರ್ಕಾರ ಕೇಸುಗಳನ್ನು ಹಾಕಿತ್ತು. ಆದರೆ, ಕೋರ್ಟ್​ನಲ್ಲಿ ಕೇಸು, ಎನ್‍ಐಎ ತನಿಖೆ ನಡೆಯುತ್ತಿರುವಾಗ ಪ್ರಕರಣ ರದ್ದತಿ ಕುರಿತು ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿದ್ದಾರೆ. ಪ್ರತಿಭಟನೆಗಳು ಹೆಚ್ಚಾದ ಬಳಿಕ ನಿನ್ನೆ ಕೋರ್ಟ್ ಒಪ್ಪಿದರೆ ಮಾತ್ರ ಕೇಸು ಹಿಂಪಡೆಯುವುದಾಗಿ ಯೂ ಟರ್ನ್ ಹೊಡೆದಿದ್ದಾರೆ ಎಂದು ಟೀಕಿಸಿದರು. ಮೊದಲು ಕೋರ್ಟಿಗೆ ಅರ್ಜಿ ಹಾಕಬೇಕಿತ್ತು ಎಂದ ಅವರು, ಓಲೈಕೆ ಮಾಡಲು ಕೇಸ್​ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಟೀಕಿಸಿದರು.

ಎಲ್ಲ ಸ್ತರದಲ್ಲೂ ಹೋರಾಟ : ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್​ನಲ್ಲಿ ಮಾತ್ರವಲ್ಲದೆ, ಜನತಾ ನ್ಯಾಯಾಲಯದಲ್ಲೂ ಬಿಜೆಪಿ ಹೋರಾಟ ಮಾಡಲಿದೆ ಎಂದು ವಿಧಾನಪರಿಷತ್ ಸದಸ್ಯ ಸಿ. ಟಿ ರವಿ ತಿಳಿಸಿದರು. ಕೇಸ್ ವಾಪಸ್ ಪಡೆಯುವಾಗ ನೀವು ಕೋಮುವಾದಿ ಎಂದು ತೋರಿಸಿದ್ದೀರಿ ಎಂದು ಟೀಕಿಸಿದರು.

ಹಿಜಾಬ್ ವಿರುದ್ಧ ಹೋರಾಟ ಮಾಡಿದವರ ಕೇಸ್ ವಾಪಸ್ ಪಡೆದಿಲ್ಲ. ಆದರೆ, ಹಿಜಾಬ್ ಪರವಾಗಿ ಹೋರಾಟ ಮಾಡಿದವರ ಕೇಸ್ ವಾಪಸ್ ಪಡೆಯುತ್ತಾರೆ. ವಿದ್ಯಾರ್ಥಿಗಳಲ್ಲೂ ಭೇದಭಾವ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಲ್ಲಿ ಟೋಪಿ ಹಾಕುವವರು ಯಾರು, ಕುಂಕುಮ ಇಡುವವರು ಯಾರೆಂದು ಭೇದಭಾವ ಮಾಡಿದ್ದೀರಿ ಎಂದು ಖಂಡಿಸಿದರು.

ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿ ಪ್ರಮುಖರಾದ ಶಾಸಕರಾದ ಡಾ. ಅಶ್ವತ್ಥ್​​ನಾರಾಯಣ್, ಎನ್ ರವಿಕುಮಾರ್, ಎಸ್. ಆರ್ ವಿಶ್ವನಾಥ್, ಸಿ. ಕೆ ರಾಮಮೂರ್ತಿ, ಮಾಜಿ ಎಂಎಲ್‍ಸಿ ಮಹಾಂತೇಶ್ ಕವಟಗಿಮಠ ಮೊದಲಾದವರು ಇದ್ದರು.

ಇದನ್ನೂ ಓದಿ :ಡಿಜೆ ಹಳ್ಳಿ, ಕೆ‌ಜಿ ಹಳ್ಳಿ ಪ್ರಕರಣಗಳ​ ಬಗ್ಗೆಯೂ ಪರಿಶೀಲಿಸುತ್ತೇವೆ: ಗೃಹ ಸಚಿವ ಪರಮೇಶ್ವರ್

ABOUT THE AUTHOR

...view details