ಕರ್ನಾಟಕ

karnataka

ETV Bharat / state

ಚನ್ನಪಟ್ಟಣ ಕದನ: ಯೋಗೇಶ್ವರ್ ಬಳಿ ಚರ್ಚಿಸುತ್ತೇವೆ, ಕುಮಾರಸ್ವಾಮಿಗೆ ಸಂಪೂರ್ಣ ಅಧಿಕಾರ: ಆರ್.ಅಶೋಕ್

ಚನ್ನಪಟ್ಟಣ ಟಿಕೆಟ್​ ಬಗ್ಗೆ ಹೆಚ್​.ಡಿ.ಕುಮಾರಸ್ವಾಮಿ ಜೊತೆ ಮಾತನಾಡುತ್ತೇವೆ. ಮೂರೂ ಕ್ಷೇತ್ರಗಳಿಗಳೂ ಅಭ್ಯರ್ಥಿಗಳನ್ನು ಚರ್ಚಿಸಿ ನಿರ್ಧರಿಸುತ್ತೇವೆ. ಎರಡು, ಮೂರು ದಿನಗಳಲ್ಲಿ ಅಂತಿಮಗೊಳಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

By ETV Bharat Karnataka Team

Published : 12 hours ago

Updated : 10 hours ago

r ashok
ಆರ್.ಅಶೋಕ್ (ETV Bharat)

ಉಡುಪಿ:ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ಸಂಬಂಧ ಹೆಚ್​.ಡಿ.ಕುಮಾರಸ್ವಾಮಿ ಜೊತೆ ಕುಳಿತು ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಕುಮಾರಸ್ವಾಮಿಯವರಿಗೆ ಈ ವಿಚಾರದಲ್ಲಿ ಸಂಪೂರ್ಣ ಅಧಿಕಾರ ಇದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಈ ಬಗ್ಗೆ ನಗರದಲ್ಲಿ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಚನ್ನಪಟ್ಟಣ ಟಿಕೆಟ್​ ಬಗ್ಗೆ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಬಳಿ ಚರ್ಚೆ ಮಾಡುತ್ತೇವೆ. ಯೋಗೇಶ್ವರ್​ ಅವರೇ ಅಭ್ಯರ್ಥಿ ಆದರೆ ಒಳ್ಳೆಯದು ಎಂದು ದೆಹಲಿಯ ವರಿಷ್ಠರಿಗೆ ಹೇಳಿದ್ದೇವೆ. ಆದರೆ, ಕುಮಾರಸ್ವಾಮಿ ಅವರೂ ಒಪ್ಪಬೇಕು. ಈ ವಿಚಾರದಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿದೆ. ಕೊನೆಯದಾಗಿ ಅವರ ತೀರ್ಮಾನದಂತೆ ಮಾಡುತ್ತೇವೆ. ನಾನು ಕೂಡ ಯೋಗೇಶ್ವರ್ ಜೊತೆ ಮಾತನಾಡುತ್ತೇನೆ. ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲಾಗುವುದು'' ಎಂದರು.

ಮಾಧ್ಯಮದವರ ಜೊತೆ ಆರ್.ಅಶೋಕ್ ಪ್ರತಿಕ್ರಿಯೆ (ETV Bharat)

ಹುಬ್ಬಳ್ಳಿ ಹೋರಾಟ ಮುಂದಕ್ಕೆ: ''ಉಪ ಚುನಾವಣೆಗೆ ತುಂಬಾ ಕಡಿಮೆ ಸಮಯ ಇದೆ. ನಾಯಕರ ಜೊತೆಗೆ ಒಂದು ಸುತ್ತಿನ ಚರ್ಚೆಯನ್ನು ಮಾಡಿದ್ದೇನೆ. ನಾವು ಹುಬ್ಬಳ್ಳಿ ವಿಚಾರವಾಗಿ ಹೋರಾಟ ನಿರ್ಧರಿಸಿದ್ದೆವು. ಸದ್ಯ ಹುಬ್ಬಳ್ಳಿ ಹೋರಾಟವನ್ನು ಮುಂದೆ ಹಾಕಿದ್ದೇವೆ. ಎಲ್ಲಾ ಶಾಸಕರು ಸೇರಿ ದೆಹಲಿ ಚಲೋ ಮಾಡಬೇಕಿತ್ತು. ಅದನ್ನೂ ಮುಂದೂಡಿದ್ದೇವೆ'' ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಹೇಳಿಕೆ 'ಚುನಾವಣಾ ಸ್ಟಂಟ್'​​: ''ನಾನೇ ಅಭ್ಯರ್ಥಿ ಅಂತ ಡಿ.ಕೆ.ಶಿವಕುಮಾರ್ ಎಲ್ಲಾ ಕಡೆಯೂ ಹೇಳುತ್ತಾರೆ. ಆದರೆ, ನೂರಕ್ಕೆ ನೂರು ಡಿ.ಕೆ.ಶಿವಕುಮಾರ್ ಸ್ಪರ್ಧಿಸಲ್ಲ. ಮಾರ್ಕ್ ಮಾಡಿಕೊಳ್ಳಿ. ನಾನು ಹೇಳುತ್ತಿದ್ದೇನೆ, ಬೇರೆ ಅಭ್ಯರ್ಥಿ ನಿಲ್ಲುತ್ತಾರೆ. ಅದು ಕಾಂಗ್ರೆಸ್ ಪಕ್ಷದ ನಿರ್ಧಾರ. ಚುನಾವಣೆಗೊಂದು ಸ್ಟಂಟ್ ಇರಲೆಂದು ಹಾಗೆ ಹೇಳಿದ್ದಾರೆ'' ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ, ನಾನೇ ಅಭ್ಯರ್ಥಿ ಎಂದು ಕೌಂಟರ್ ಕೊಟ್ಟಿರುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ''ಎರಡೂ ಸುಳ್ಳು, ನಿಜವಾದ ಅಭ್ಯರ್ಥಿ ಬೇರೆ ಆಗಿದ್ದಾರೆ. ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿ, ಎನ್​ಡಿ ಎ ಅಭ್ಯರ್ಥಿ ನಿಲ್ಲಿಸುತ್ತೇವೆ'' ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಮುಡಾ ಹಾಗೂ ವಾಲ್ಮೀಕಿ ಹಗರಣಗಳ ವಿರುದ್ಧ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿಯ ಹೋರಾಟದಿಂದ ಇವತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬಂದಿದೆ. ನಮ್ಮ ಹೋರಾಟದಿಂದಲೇ ಇ.ಡಿ, ಲೋಕಾಯುಕ್ತ ತನಿಖೆಗಳು ಆಗುತ್ತಿವೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂದರು.

ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್‌ ನಿವೇಶನಗಳನ್ನು ವಾಪಸ್​ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್​, ಅವರಿಗೆ(ಖರ್ಗೆ) ಸಿಎಂ ಆಗಬೇಕೆಂದು ಬಹಳ ದಿನದಿಂದಲೂ ಆಸೆ ಇದೆ. 30, 40 ವರ್ಷಗಳಿಂದ ಪ್ರಯತ್ನಿಸಿದರೂ ಆಗಲಿಲ್ಲ. ಈಗ ಒಂದು ಅವಕಾಶ ಬಂದಿದೆ ಎಂದು ಹೇಳಿದರು.

ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ:ಇದೇ ವೇಳೆ, ವಿಧಾನಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ,''ಸಿಎಂ ರೇಸ್​​ನಲ್ಲಿ ಯಾರು ಬೇಕಾದರೂ ಇರಲಿ, ಅದು ಅವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್​​ನಲ್ಲಿ ಹೊಸ ಅಲಿಖಿತ ಕಾನೂನು ಬಂದಿದೆ'' ಎಂದರು. ಉಪಚುನಾವಣೆ ಬಗ್ಗೆ ಉತ್ತರಿಸುತ್ತ, ''ಪಕ್ಷದ ಎಲ್ಲಾ ಹಿರಿಯರು ಯೋಗೇಶ್ವರ್ ಜೊತೆ ಸಂಪರ್ಕದಲ್ಲಿದ್ದಾರೆ. ಯಾವುದೇ ತೊಂದರೆ ಆಗುವುದಿಲ್ಲ'' ಎಂದು ಹೇಳಿದರು.

ಖರ್ಗೆ ಸೈಟ್ ವಾಪಸ್ ವಿಚಾರವಾಗಿ ಮಾತನಾಡಿ, ''ಯಾರು ಬೇಕಾದರೂ ಕದಿಯಬಹುದು. ವಾಪಸ್​​ ಕೊಟ್ಟ ನಂತರ ಅವರು ಅಪರಾಧಿಗಳಲ್ಲ ಅಂತಲ್ಲ. ಸೈಟ್ ವಾಪಸ್ ಕೊಟ್ಟರೆ ನಮ್ಮ ಹೋರಾಟದ ವೇಗ ಕಡಿಮೆಯಾಗುವುದಿಲ್ಲ. ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ. ಐದು ವರ್ಷ ಆದ ನಂತರ ಇರಬಹುದಾದ ವಾತಾವರಣ ಈಗಲೇ ಇದೆ. ಚುನಾವಣೆಯ ಕಾಲ ಏನ್ನುವಂತಿದೆ'' ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆ: ಎನ್​ಡಿಎ ಮೈತ್ರಿ, ಕಾಂಗ್ರೆಸ್​ನಿಂದ ಯಾರು ಸಂಭಾವ್ಯ ಅಭ್ಯರ್ಥಿ?

Last Updated : 10 hours ago

ABOUT THE AUTHOR

...view details